ಬೆಳಗಾವಿ : ಮೃತ ಮಹಿಳೆಯ ಸಮಾಧಿ ಮೇಲೆ ಕಾಗೆಗೆ ಇಟ್ಟಿದ್ದ ಆಹಾರವನ್ನು ಕಾಗೆ ತಿನ್ನಲಿಲ್ಲ ಎಂದು ಯುವಕರು ತಿಂದಿರುವ ಘಟನೆ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಜಲಾಲಪೂರ ಗ್ರಾಮದಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಜಲಾಲಪುರ ಗ್ರಾಮದ ಸೇವಂತಿ ಕರುಣೆ ಎಂಬ ಮಹಿಳೆ ಮೃತಪಟ್ಟಿದ್ದರು. ಹೀಗಾಗಿ ಇಂದು ಕಾಗೆಗೆ ಪಿಂಡ ಇಡುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಈ ವೇಳೆ ಸಮಾಧಿ ಮೇಲೆ ಆಹಾರವಿಟ್ಟು ಒಂದು ಗಂಟೆ ಕಳೆದರೂ ಕಾಗೆಗಳು ಬರದೇ ಇರುವುದನ್ನು ಗಮನಿಸಿದ ದಲಿತ ಸಂಘರ್ಷ ಸಮಿತಿ ಭೀಮವಾದ ಯುವ ಸೇನೆಗೆ ಸೇರಿದ ಯುವಕರು ಸಮಾಧಿ ಮೇಲೆ ಇಡಲಾಗಿದ್ದ ಕಾಗೆ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ಯುವಕರು ಸಮಾಧಿಯ ಮೇಲಿದ್ದ ಆಹಾರವನ್ನು ಸೇವಿಸಿದ್ದು ಸ್ಥಳೀಯ ಜನರಲ್ಲಿ ಆಶ್ಚರ್ಯ ಮೂಡಿಸಿತ್ತು.










