ಮಡಿಕೇರಿ : ಮಧ್ಯಪಾನ ಮಾಡಲು ಹಣ ನೀಡದ್ದಕ್ಕೆ ಮಗನೇ ತಂದೆಯನ್ನು ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಗ್ರಾಮದಲ್ಲಿ ನಡೆದಿದೆ. ಜೇನುಕುರುಬರ ಕರಿಯಪ್ಪ(46) ಮೃತ ತಂದೆ ಎಂದು ಗುರುತಿಸಲಾಗಿದ್ದು, ಲೋಕೇಶ್ ಈ ಕೃತ್ಯ ಎಸಗಿದ ಪಾಪಿ ಮಗ. ಲೋಕೇಶ್ ಅವರು ನಿನ್ನೆ ತಡರಾತ್ರಿ ಮನೆಗೆ ಕುಡಿದು ಬಂದು ತಂದೆ-ತಾಯಿ ಬಳಿ ಮಧ್ಯಪಾನ ಮಾಡಲು ಹಣವನ್ನು ಕೇಳಿದ್ದಾರೆ. ಈ ವೇಳೆ ತಂದೆ ತಾಯಿ ಹಣವನ್ನು ನೀಡಲು ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಮಗ ಲೋಕೇಶ್ ತಂದೆ ತಾಯಿ ಇಬ್ಬರಿಗೂ ಮರದ ತುಂಡಿನಿಂದ ಗಂಭೀರವಾಗಿ ಥಳಿಸಿ ಮನೆಯಿಂದ ಹೊರಟು ಹೋಗಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಕರಿಯಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಸೋಮವಾರಪೇಟೆ ಠಾಣಾ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.










