ಧಾರವಾಡ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಾಳೆ ಶಿಲಾನ್ಯಾಸ ನೆರವೇರಲಿದ್ದು, ಈ ಹಿನ್ನೆಲೆ ಕಲಾವಿದರು ಹಾಗೂ ಭಕ್ತರು ತಮ್ಮದೇ ಶೈಲಿಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಅದರಂತೆ ಧಾರವಾಡದಲ್ಲಿ ಕಲಾವಿದ ಮಂಜುನಾಥ ಹಿರೇಮಠ ಎಂಬುವವರು ಮರಳಿನಲ್ಲಿ ಅಯೋಧ್ಯೆಯ ರಾಮಮಂದಿರ ಕಲಾಕೃತಿ ರಚಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಕಲಾಇದ ಮಂಜುನಾಥ ಅವರು ನಗರದ ದೊಡ್ಡನಾಯಕನಕೊಪ್ಪದಲ್ಲಿ ರಾಮಮಂದಿರದ ಕಲಾಕೃತಿ ರಚಿಸಲು ಒಂದು ಟಿಪ್ಪರ್ ಲೋಡ್ ಮರಳನ್ನು ಹಾಕಿಸಿಕೊಂಡು 6 ಅಡಿ ಎತ್ತರ ಹಾಗೂ 10 ಅಡಿ ಅಗಲದಲ್ಲಿ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಚಿಕ್ಕ ಮೂರ್ತಿಯನ್ನು ತಯಾರಿಸಿ ಮಂದಿರದ ಮೇಲೆ ಇಟ್ಟಿದ್ದಾರೆ. ಬಳಿಕ ದೊಡ್ಡನಾಯಕನಕೊಪ್ಪದ ನಿವಾಸಿಗಳೆಲ್ಲರೂ ಸೇರಿ ಮರಳಿನಲ್ಲಿ ಅರಳಿದ ರಾಮಮಂದಿರಕ್ಕೆ ಆರತಿ ಬೆಳಗಿ ಪೂಜೆಯನ್ನು ಸಲ್ಲಿಸಿದ್ದಾರೆ.











