ಚಿಕ್ಕಮಗಳೂರು : ಒತ್ತುವರಿ ಮಾಡಿರುವ ಸ್ಮಶಾನದ ಜಾಗವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

177
firstsuddi

ಚಿಕ್ಕಮಗಳೂರು : ಮೇಲ್ವರ್ಗದವರು ಒತ್ತುವರಿ ಮಾಡಿರುವ ತಮ್ಮ ಸಮುದಾಯದ ಸ್ಮಶಾನದ ಜಾಗವನ್ನು ತೆರವುಗೊಳಿಸುವಂತೆ ತಾಲ್ಲೂಕಿನ ಬೊಂಬೈಲು ಗ್ರಾಮದ ಆದಿಕರ್ನಾಟಕ ಜನಾಂಗದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ|| ಕೆ.ಕುಮಾರ್ ಅವರನ್ನು ಭೇಟಿ ಮಾಡಿದ ಪರಿಶಿಷ್ಠರು ಈ ಸಂಬಂಧ ಮನವಿ ಸಲ್ಲಿಸಿದರು.
ತಾಲ್ಲೂಕಿನ ಬಸಗೋಡು ಗ್ರಾಮದ ಸರ್ವೆ ನಂ. 131 ಮತ್ತು 132 ರಲ್ಲಿ ತಮ್ಮ ಸಮುದಾಯದ ಸ್ಮಶಾನವಿದ್ದು, ಅದನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿದ್ದಾರೆ. ಇದರಿಂದಾಗಿ ನಮ್ಮವರು ಮೃತಪಟ್ಟಾಗ ಶವ ಸಂಸ್ಕಾರ ಮಾಡಲು ಜಾಗವಿಲ್ಲದೇ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಗ್ರಾಮದಲ್ಲಿ ತಮ್ಮ ಸಮುದಾಯದ 80 ಮನೆಗಳಿದ್ದು, ಸ್ಮಶಾನದ ಒತ್ತುವರಿಯಿಂದಾಗಿ ಸಮುದಾಯ ಭವನ ನಿರ್ಮಾಣ ಹಾಗೂ ಶಾಲಾ ಆಟದ ಮೈದಾನಕ್ಕೂ ಜಾಗವಿಲ್ಲದಂತಾಗಿದೆ ಎಂದು ತಿಳಿಸಿದರು.
ಬಿಎಸ್‍ಪಿ ಕಛೇರಿ ಕಾರ್ಯದರ್ಶಿ ಗಂಗಾಧರ್, ಪದಾಧಿಕಾರಿಗಳಾದ ವಿ.ಹರೀಶ್, ಹನುಮಂತರಾಯ, ಜೋಸೇಫ್, ಸುರೇಶ್, ಗ್ರಾಮದ ಮುಖಂಡರಾದ ಬಿ.ಯು.ಉಮೇಶ್, ಬಿ.ಡಿ.ಪುಟ್ಟಸ್ವಾಮಿ, ದೇವೇಂದ್ರ, ಹರೀಶ್, ಇಂದ್ರೇಶ್ ಹಾಜರಿದ್ದರು.