ಮಂಡ್ಯ: ಇಂದು ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಚಲುವನಾರಯಣಸ್ವಾಮಿಯ ಐತಿಹಾಸಿಕ ವೈರಮುಡಿ ಉತ್ಸವ ಜರಗಲಿದ್ದು, ಕೊರೊನಾ ಹಿನ್ನೆಲೆ ಸರಳವಾಗಿ ನಡೆಯಲಿದೆ. ಹೀಗಾಗಿ ವೈರಮುಡಿ ಕಿರೀಟವನ್ನು ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಮುಡಿಸಲು ಇಂದು ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ತರಲಾಯಿತು.
ಮೇಲುಕೋಟೆ ಸ್ಥಾನಿಕ ಅರ್ಚಕರು ಜಿಲ್ಲಾಧಿಕಾರಿ ಅಶ್ವಥಿಯವರಿಂದ ಕಿರೀಟವನ್ನು ಬರಮಾಡಿಕೊಂಡರು. ಜಿಲ್ಲಾಧಿಕಾರಿ ಅಶ್ವಥಿ ಹಾಗೂ ಎಸ್ಪಿ ಅಶ್ವಿನಿ ಅವರು ದೇವಾಲಯದ ಸ್ಥಾನಿಕರ ಸಮ್ಮುಖದಲ್ಲಿ ಆಭರಣಗಳ ಪರಿಶೀಲನೆ ಮಾಡಲಾಯಿತು. ಬಳಿಕ ಸಂಪ್ರದಾಯದಂತೆ ಜಿಲ್ಲಾಧಿಕಾರಿ ಅವರು ಪೂಜೆ ಸಲ್ಲಿಸಿದರು.
ಚಲುವನಾರಾಯಣಸ್ವಾಮಿಗೆ ರಾತ್ರಿ 8.30 ಕ್ಕೆ ಕಿರೀಟ ಧಾರಣೆ ಮಾಡಿ ವೈರಮುಡಿ ಉತ್ಸವವನ್ನು ಆರಂಭ ಮಾಡಲಾಗುತ್ತದೆ. ಇನ್ನೂ ಕೊರೊನಾ ಅಟ್ಟಹಾಸ ಇರುವ ಕಾರಣ ಈ ಬಾರಿಯ ಉತ್ಸವಕ್ಕೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದ ಭಕ್ತರಿಗೆ ನಿಷೇಧ ವಿಧಿಸಲಾಗಿದ್ದು, ಸ್ಥಳೀಯರಿಗೆ ಮಾತ್ರ ಈ ಉತ್ಸವದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಲ್ಗೊಳ್ಳಬೇಕೆಂದು ಹೀಗಾಗಲೇ ಜಿಲ್ಲಾಡಳಿತ ಸೂಚನೆಯನ್ನು ನೀಡಲಾಗಿದೆ.










