ಬೆಂಗಳೂರು : ಪಿಎ ರಾಜಣ್ಣ ಬಂಧನದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು ಅವರು, ಯಾರೂ ಕೂಡ ಯಾರ ಹೆಸರನ್ನೂ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು. ತನಿಖೆ ನಡೆಯುವ ಸಮಯದಲ್ಲಿ ನಾನು ಹೆಚ್ಚಿಗೆ ಮಾತನಾಡಲು, ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನನಗೆ ಗೊತ್ತಿರುವ ಹುಡುಗ, ನನ್ನ ಬಳಿಯೇ ಕೆಲಸ ಮಾಡುತ್ತಿದ್ದ, ಹಾಗೆಂದು ಅಧಿಕೃತವಾಗಿ ನನ್ನ ಕಚೇರಿಯಲ್ಲಿ ಕೆಲಸಕ್ಕೆ ಇದ್ದವನಲ್ಲ, ನಿನ್ನೆ ಆತನನ್ನು ನನ್ನ ನಿವಾಸಕ್ಕೆ ಬಂದು ಪೊಲೀಸರು ಬಂಧಿಸುವವರೆಗೆ ನನಗೆ ಯಾವುದೇ ಮಾಹಿತಿಯಿರಲಿಲ್ಲ. ವಿಜಯೇಂದ್ರ ಅವರ ಜೊತೆ ಕೂಡ ಮಾತನಾಡುತ್ತೇನೆ. ಸಿಎಂ ಜೊತೆ ಕೂಡ ಮಾತಾಡುತ್ತೇನೆ. ವಿಜಯೇಂದ್ರ ಈ ವಿಚಾರವನ್ನು ನನ್ನ ಗಮನಕ್ಕೆ ತಂದಿಲ್ಲ. ಮೊದಲೇ ನನ್ನ ಗಮನಕ್ಕೆ ತಂದಿರುತ್ತಿದ್ದರೆ ಕೂರಿಸಿ ವಿಚಾರಿಸಿ ಮಾತಾಡುತ್ತಿದ್ದೆ ಎಂದರು.
ರಾಜಣ್ಣ ತಪ್ಪು ಮಾಡುತ್ತಿದ್ದಾನೆ ಎಂದರೆ ನನ್ನ ಬಳಿ ಹೇಳಬಹುದಿತ್ತು. ನಾನು ಅವನ ಮೇಲೆ ಕ್ರಮ ಕೈಗೊಳ್ಳುತ್ತಿದ್ದೆ. ಅದು ಬಿಟ್ಟು ವಿಜಯೇಂದ್ರ ಏಕಾಏಕಿ ದೂರು ಕೊಟ್ಟಿರುವುದು ಸರಿಯಲ್ಲ. ಇದರಿಂದ ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ ಎಂದು ಸಚಿವ ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದಾರೆ.










