ಚಿಕ್ಕಮಗಳೂರು : ಎಸ್.ಎಲ್.ಧರ್ಮೇಗೌಡ ಅವರ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಇಂದಿನ ಪೀಳಿಗೆಯ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಸಲಹೆ ಮಾಡಿದರು.
ದಿವಂಗತ ಎಸ್.ಎಲ್.ಧರ್ಮೇಗೌಡ ಅವರ ಸ್ಮರಣಾರ್ಥ ನಗರದ ಜೆಡಿಎಸ್ ಕಛೇರಿಯಲ್ಲಿ ನಿನ್ನೆ ಹಮಾಲಿ ಕಾರ್ಮಿಕರು ಮತ್ತು ಬಡ ಕುಟುಂಬಗಳಿಗೆ ಪಡಿತರ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅತ್ಯುತ್ತಮ ರಾಜಕಾರಣಿಯಾಗಿದ್ದ ಎಸ್.ಎಲ್.ಧರ್ಮೇಗೌಡರು ಜನಾನು ರಾಗಿದ್ದರು. ಬಡವರು, ರೈತರ ಪರ ಕಾಳಜಿ ಹೊಂದಿದ್ದರು. ಶಿಸ್ತು, ಕರ್ತವ್ಯ ನಿಷ್ಟೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು ಎಂದು ಹೇಳಿದರು.
ರಾಜ್ಯ ಸಹಕಾರಿ ಕ್ಷೇತ್ರದ ಅತ್ಯುತ್ತಮ ನಾಯಕನಾಗಿದ್ದ ಧರ್ಮೇಗೌಡರನ್ನು ಕಳೆದುಕೊಂಡಿದ್ದು ಜಿಲ್ಲೆಗೆ ಅತೀ ದೊಡ್ಡ ನಷ್ಟ ಎಂದು ತಿಳಿಸಿದರು.
ಎಸ್.ಎಲ್.ಧರ್ಮೇಗೌಡ ಅವರ ಸ್ಮರಣಾರ್ಥ ಹಮಾಲಿ ಕಾರ್ಮಿಕರು, ವಾಹನ ಚಾಲಕರು ಸೇರಿದಂತೆ 300 ಬಡ ಕುಟುಂಬಗಳಿಗೆ ಪಡಿತರ ಕಿಟ್ಗಳನ್ನು ವಿತರಿಸಲಾಯಿತು.
ಪಕ್ಷದ ಮುಖಂಡರಾದ ಮಂಜಪ್ಪ, ಎ.ಸಿ.ಕುಮಾರ್, ಹೊಲದಗದ್ದೆ ಗಿರೀಶ್, ಸಿ.ಕೆ.ಮೂರ್ತಿ, ದೇವರಾಜ್ಅರಸ್, ಮುಸ್ತಾಕ್, ಹುಣಸೇಮಕ್ಕಿ ಲಕ್ಷ್ಮಣ್, ಕೆ.ಯು.ಪ್ರದೀಪ್, ಆನಂದೇಗೌಡ, ಹೆಚ್.ಎಸ್.ಶರತ್ ಉಪಸ್ಥಿತರಿದ್ದರು.










