ಚಿಕ್ಕಮಗಳೂರು : ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಜಿಲ್ಲೆಯ ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದಲ್ಲಿ ನಡೆದಿದೆ.
ವೀಣಾ(70), ಶಾರದಾ(49), ಶ್ರಾವ್ಯಾ(16) ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವೀಣಾ ಶೃಂಗೇರಿಯ ಹೊನ್ನವಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಅಂಗನವಾಡಿಗೆ ತೆರಳದ ಹಿನ್ನೆಲೆಯಲ್ಲಿ ಅಂಗನವಾಡಿ ಸಹಾಯಕಿ ಪೂರ್ಣಿಮಾ, ವೀಣಾಗೆ ಕರೆ ಮಾಡಿದ್ದಾರೆ. ಅವರು ಫೋನ್ ಸ್ವೀಕರಿಸಿಲ್ಲ. ಆಗ ಪೂರ್ಣಿಮಾ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಿಯರು ಬಾಗಿಲು ಬಡಿದರೂ ಯಾರೂ ತೆಗೆಯದ ಹಿನ್ನೆಲೆ ಮನೆಯ ಹಂಚು ತೆಗೆದು ನೋಡಿದಾಗ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










