ಐಪಿಎಸ್ ಅಧಿಕಾರಿ ಹತ್ಯೆ ಪ್ರಕರಣ ; ಮನೆ ಕೆಲಸದವನ ಬಂಧನ…

114
firstsuddi

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಕುಮಾರ್ ಲೋಹಿಯಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯ ಕೆಲಸದವನನ್ನು ಪೊಲೀಸರು ಬಂಧಿಸಿದ್ದಾರೆ.

ಹೇಮಂತ್ ಲೋಹಿಯಾ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಮನೆ ಕೆಲಸಗಾರ ಯಾಸಿರ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಹೇಮಂತ್ ಕುಮಾರ್ ಲೋಹಿಯಾ ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಕೊಲೆಯ ನಂತರ ಯಾಸಿರ್ ಪರಾರಿಯಾಗಿದ್ದ. ನಾಪತ್ತೆಯಾಗಿದ್ದ ಯಾಸಿರ್ ಗಾಗಿ ನಿನ್ನೆ ರಾತ್ರಿಯಿಂದ ಹುಡುಕಾಟ ನಡೆಸಿದ್ದ ಪೊಲೀಸರ ತಂಡ ಕೊನೆಗೂ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಹತ್ಯೆಗೂ ಮುನ್ನ ಅಧಿಕಾರಿ ಲೋಹಿಯಾ ಅವರು ತಮ್ಮ ಕಾಲಿಗೆ ಎಣ್ಣೆಯನ್ನು ಹಚ್ಚುತ್ತಿದ್ದರು. ನಂತರ ಒಡೆದ ಬಾಟಲ್ ನಿಂದ ಅವರ ಕತ್ತನ್ನು ಸೀಳಿ ಹತ್ಯೆ ಮಾಡಲಾಗಿದೆ. ಯಾಸಿರ್ ಅಹ್ಮದ್ ಸುಮಾರು ಆರು ತಿಂಗಳಿನಿಂದ ಲೋಹಿಯಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಖಿನ್ನತೆಯಿಂದ ಬಳಲುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.