ಬೀದರ್: ಬೀದರ್ನ ಬ್ರಿಮ್ಸ್ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ ಹೆರಿಗೆ ವೇಳೆಯಲ್ಲಿ 2 ಹಸುಗೂಸುಗಳ ಕಾಲಿನ ಮೂಳೆ ಮುರಿದಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೀದರ್ ತಾಲೂಕಿನ ಚಿಲ್ಲರ್ಗಿ ಗ್ರಾಮದ ಶ್ರೀದೇವಿ ಎಂಬುವರು 2024 ರ ಡಿ.28 ರಂದು ಹೆರಿಗೆಗೆ ದಾಖಲಾಗಿದ್ದರು. ಸಹಜ ಹೆರಿಗೆ ಆಗುತ್ತದೆಂದು ವೈದ್ಯರು ತಿಳಿಸಿದ್ದರು. ಆದರೆ, ಬಳಿಕ ಸಹಜ ಹೆರಿಗೆ ಕಷ್ಟ ಎಂದು ಸಿಸೇರಿಯನ್ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಆದ ಬಳಿಕ 2 ಗಂಟೆ ಕಳೆದರೂ ಮಗು ಕಾಲನ್ನು ಅಲ್ಲಾಡಿಸಲಾಗಿದೆ ಅಳುವುದಕ್ಕೆ ಪ್ರಾರಂಭಿಸಿದೆ. ಹಸುಗೂಸಿನ ಕುಟುಂಬದ ಸದಸ್ಯರು ಮಗು ಅಳುವುದನ್ನು ನೋಡಿ ವೈದ್ಯರಿಗೆ ತೋರಿಸಿದ್ದಾರೆ. ವೈದ್ಯರು ಸ್ಕ್ಯಾನ್ ಮಾಡಿಸಿದಾಗ ಮಗುವಿನ ಬಲಗಾಲಿನ ತೊಡೆಯ ಮೂಳೆ ಮುರಿದಿರುವುದು ತಿಳಿದುಬಂದಿದೆ. ಮೂಳೆ ಮುರಿದಿರುವ ಕುರಿತು ವೈದ್ಯರನ್ನು ಪ್ರಶ್ನಿಸಿದಾಗ, ಸಿಸೇರಿಯನ್ ಮಾಡುವಾಗ ಮೂಳೆ ಮುರಿದಿದೆ. ಇದೆಲ್ಲಾ ಸಹಜ ಎಂದು ಹೇಳಿ ಕುಟುಂಬಸ್ಥರನ್ನು ಹೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಮಗೆ ನ್ಯಾಯ ಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.










