ಬೆಂಗಳೂರು: ಹಿರಿಯರು ನಿಶ್ಚಯಿಸಿದ್ದ ಮದುವೆಯಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧುವಿನ ಪ್ರಿಯಕರ ಮದುವೆಗೆ ಎಂಟ್ರಿ ಕೊಡುತಿದ್ದಂತೆ ಮಧುಮಗಳು ಮದುವೆಯನ್ನು ನಿರಾಕರಿಸಿರುವ ಘಟನೆ ನೆಲಮಂಗಲದ ವಿಶ್ವಶಾಂತಿ ಆಶ್ರಮದ ಶ್ರೀ ವಿಜಯ ವಿಠಲ ಸಮುದಾಯ ಭವನದಲ್ಲಿ ನಡೆದಿದೆ. ನಂದರಾಮಯ್ಯನಪಾಳ್ಯದ ವರ ಶ್ರೀರಂಗನಾಥ ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯದ ವಧು ಪದ್ಮಪ್ರಿಯರ ಎಂಬವರ ಜೊತೆ ವಿವಾಹ ನಡೆಯಬೇಕಿತ್ತು. ಆದರೆ ತಾಳಿಕಟ್ಟುವ ವೇಳೆಗೆ ವಧುವಿನ ಪ್ರಿಯಕರ ಸಂಜು ಎಂಬುವರು ಎಂಟ್ರಿ ಕೊಡುತಿದ್ದಂತೆ ವಧು ಮದುವೆಯನ್ನು ನಿರಾಕರಿಸಿ ಸಂಜುವನ್ನೇ ವಿವಾಹವಾಗುವುದಾಗಿ ಹಠ ಹಿಡಿದಿದ್ದಾಳೆ. ಸಂಜು ಮತ್ತು ಪದ್ಮಪ್ರಿಯಳಿಗೆ ಹಲವು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾಗಿ ಪ್ರೀತಿ ಮಾಡುತ್ತಿದ್ದರು. ಈ ವಿಷಯ ತಿಳಿದ ಯುವತಿ ಕಡೆಯವರು ರಂಗನಾಥ್ ಜೊತೆ ಮದುವೆ ಫಿಕ್ಸ್ ಮಾಡಿದ್ದರು. ಸ್ಥಳಕ್ಕಾಗಮಿಸಿದ ನೆಲಮಂಗಲ ಪಟ್ಟಣ ಪೊಲೀಸರು ಪ್ರಿಯಕರ ಸಂಜು ಹಾಗೂ ಪದ್ಮಪ್ರಿಯಾ ಇಬ್ಬರನ್ನು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಕೊನೆಗೆ ನೆಲಮಂಗಲ ಪಟ್ಟಣ ಗಣೇಶನಗುಡಿಯಲ್ಲಿ, ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಪದ್ಮಪ್ರಿಯ ಹಾಗೂ ಸಂಜು ವಿವಾಹ ನಡೆದಿದೆ.










