ಮಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ವಿಚಾರಣೆಗೆ ಸಂಬಂಧಿಸಿದಂತೆ ಖ್ಯಾತ ನಿರೂಪಕಿ ಅನುಶ್ರೀ ಅವರ ವಿಚಾರಣೆ ನಡೆಸಿದ ಇನ್ಸ್ ಪೆಕ್ಟರ್ ಶಿವಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇದರ ಹಿಂದೆ ಶಾಸಕರ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮೊದಲು ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಅವರನ್ನು ಬಂಧಿಸಲಾಗಿತ್ತು. ಈ ವೇಳೆಯೂ ಕೂಡಾ ಕಿಶೋರ್ ಶೆಟ್ಟಿಯನ್ನು ಪ್ರಕರಣದ ಕೈಬಿಡುವಂತೆ ಒತ್ತಾಯಿಸಲಾಗಿತ್ತು. ಆದರೆ ಶಿವಕುಮಾರ್ ಅವರು ಶಾಸಕರ ಒತ್ತಾಯಕ್ಕೆ ಮಣಿಯದೇ ವಿಚಾರಣೆಯನ್ನು ಮುಂದುವರೆಸಿದ್ದರು ಎಂದು ತಿಳಿದು ಬಂದಿದೆ. ಕಿಶೋರ್ ಶೆಟ್ಟಿ ಮಾತ್ರವಲ್ಲದೇ ನಿರೂಪಕಿ ಅನುಶ್ರೀ ಅವರ ವಿಚಾರಣೆಯೂ ಕೂಡಾ ಶಿವಪ್ರಕಾಶ್ ಅವರೇ ನಡೆಸುತ್ತಿದ್ದರು. ಈ ಹಿನ್ನೆಲೆ, ಏಕಾಏಕಿ ಶಿವಪ್ರಕಾಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಈ ಪ್ರಕರಣದಿಂದ ಅನುಶ್ರೀ ಅವರನ್ನು ಕೈಬಿಡಯವಂತೆ ಪ್ರಭಾವಿ ನಾಯಕರು ಕೂಡಾ ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.










