ಬಂಗಾರಪೇಟೆ : ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ಡೌನ್ ಆಗಿರುವ ಹಿನ್ನಲೆ, ಮಧ್ಯ ಮಾರಾಟವಾಗದೆ ಇರುವುದರಿಂದ ಕೆಲವು ದುಷ್ಕರ್ಮಿಗಳು ಎಂ.ಎಸ್.ಐ.ಎಲ್ ಅಂಗಡಿಯ ಗೋಡೆ ಕೊರೆದು ಮಧ್ಯ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ನಡೆದಿದೆ. ಕಳೆದ 9 ದಿನಗಳಿಂದ ದೇಶಾದ್ಯಂತ ಲಾಕ್ಡೌನ್ ಆಗಿರುವುದರಿಂದ ಮದ್ಯ ಮಾರಾಟವನ್ನು ಬಂದ್ ಮಾಡಲಾಗಿದ್ದು, ಇದರಿಂದ ಮದ್ಯ ಸಿಗದೆ ಕೆಲವು ಮದ್ಯ ಪ್ರಿಯರು ಮಾನಸೀಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ನಡುವೆಯೇ ಕೆಲವು ದುಷ್ಕರ್ಮಿಗಳು ಬಂಗಾರಪೇಟೆ ತಾಲ್ಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ಎಂ.ಎಸ್.ಐ.ಎಲ್ ಗೆ ಸೇರಿದ ಮದ್ಯದ ಅಂಗಡಿಯ ಗೋಡೆಯನ್ನು ಕೊರೆದು ಅಂಗಡಿ ಒಳಗಿದ್ದ ಸುಮಾರು 25 ಸಾವಿರಕ್ಕೂ ಹೆಚ್ಚು ಮೌಲ್ಯದ ಮದ್ಯವನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬಂಗಾರಪೇಟೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










