ಕೊಟ್ಟಿಗೆಹಾರ:ಪ್ರಕೃತಿ ಸೌಂದರ್ಯಕ್ಕೆ ದಕ್ಕೆ ಬಾರದಂತೆ ಪ್ರಕೃತಿಗೆ ಪೂರಕವಾಗಿ ಪ್ರವಾಸಿ ತಾಣಗಳ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದರು.
ಮೂಡಿಗೆರೆಯ ಪ್ರವಾಸಿ ತಾಣಗಳಾದ ದೇವರಮನೆ, ಬಲ್ಲಾಳರಾಯನ ದುರ್ಗ, ನಿಡುವಾಳೆಯ ರಾಮೇಶ್ವರ ದೇವಸ್ಥಾನ ಹಾಗೂ ಜಾವಳಿಯ ಹೇಮಾವತಿ ನದಿ ಮೂಲಕ್ಕೆ ಬೇಟಿ ನೀಡಿ ಮಾತನಾಡಿದರು.
ದೇವರಮನೆ ಕಾಲಬೈರವೇಶ್ವರ ದೇಗುಲ ಪುಷ್ಕರಣಿ ಜೀರ್ಣೊದ್ದಾರಕ್ಕೆ 50 ಲಕ್ಷ, ಬಲ್ಲಾಳರಾಯನ ದುರ್ಗ ಕೋಟೆ ಸಂರಕ್ಷಣೆಗೆ 1 ಕೋಟಿ, ಹೇಮಾವತಿ ನದಿ ಉಗಮ ಸ್ಥಳ ಅಭಿವೃದ್ದಿಗೆ 50 ಲಕ್ಷ ಬಿಡುಗಡೆ ಮಾಡಲಾಗಿದೆ. ಬಲ್ಲಾಳರಾಯನ ದುರ್ಗ, ಬಲ್ಲಾಳರಾಯನ ದುರ್ಗದ ರಾಣಿಝರಿ ಬಳಿ ತಾಂತ್ರಿಕ ವರದಿ ಆಧಾರಿಸಿ ಕಣಿವೆ ದೃಶ್ಯ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು. ಯಾವುದೇ ಅಭಿವೃದ್ದಿಯೂ ಪ್ರಕೃತಿಗೆ ವಿರುದ್ದವಾಗಿ ಪ್ರಕೃತಿಯ ಅಂದ ಕೆಡಿಸುವಂತೆ ಇರಬಾರದು. ಪ್ರಕೃತಿ ಸೌಂದರ್ಯವನ್ನು ವಿರೂಪಗೊಳಿಸದ ರೀತಿಯಲ್ಲಿ ಪ್ರಕೃತಿ ಸಹಜತೆಗೆ ದಕ್ಕೆ ಬಾರದಂತೆ ಯೋಜನೆ ರೂಪಿಸಬೇಕಿದೆ ಎಂದರು.
ರಾಣಿಝರಿಯಲ್ಲಿ ಕೇಬಲ್ ಕಾರ್ ಆರಂಭಿಸುವ ಬಗ್ಗೆ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಣಿಝರಿಯಲ್ಲಿ ಕೇಬಲ್ ಕಾರ್ ಅಳವಡಿಸುವ ಚಿಂತನೆ ಇಲ್ಲ. ರಾಣಿಝರಿ ಚಾರಣಕ್ಕೆ ಸೂಕ್ತವಾದ ಪ್ರದೇಶ. ಚಾರಣಕ್ಕೆ ಸೀಮಿತವಾಗಿಸುವುದು ಸೂಕ್ತ ಎಂದರು.
ಹೇಮಾವತಿ ನದಿಮೂಲದ ಕಲ್ಯಾಣಿಯ ಮೂಲಕ್ಕೆ ಧಕ್ಕೆ ಬಾರದಂತೆ ಕಲ್ಯಾಣಿಯನ್ನು ಅಭಿವೃದ್ದಿ ಪಡಿಸಲಾಗುವುದು. ಎಂದರು. ತಡೆಗೋಡೆಗಳನ್ನು ನಿರ್ಮಿಸುವ ಬಗ್ಗೆ ಯೋಜನಾವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೂಲುಹುಣ್ಣಿಮೆ ದಿನವಾದ ಭಾನುವಾರ ದೇವರಮನೆಯ ಶ್ರೀಕಾಲಬೈರವೇಶ್ವರ ದೇವಸ್ಥಾನದಲ್ಲಿ ಅರ್ಚಕರು ಸಚಿವರು, ಶಾಸಕರು ಹಾಗೂ ದೇವಸ್ಥಾನಕ್ಕೆ ಬಂದಿದ್ದ ಜನಪ್ರತಿನಿಧಿಗಳಿಗೆ ನೂಲನ್ನು ಕಟ್ಟಿದ್ದರು.
ಈ ಸಂದರ್ಭದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ, ತಾ.ಪಂ ಅಧ್ಯಕ್ಷ ಕೆ.ಸಿ ರತನ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್ ರಘು, ಉಪವಿಭಾಗಾಧಿಕಾರಿ ನಾಗರಾಜ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ತಹಶೀಲ್ದಾರ್ ರಮೇಶ್, ಉಪವಲಯ ಸಂರಕ್ಷಣಾಧಿಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಮೋಹನ್, ವೃತ್ತ ನಿರೀಕ್ಷಕ ಜಗನ್ನಾಥ್, ಪಿಎಸ್ಐಗಳಾದ ಶ್ರೀನಾಥ್ ರೆಡ್ಡಿ, ಮೂರ್ತಿ, ಬಿಜೆಪಿ ಮುಖಂಡರಾದ ಬಿ.ಎಂ ಭರತ್, ಟಿ.ಎಂ ಗಜೇಂದ್ರ, ಅನೂಪ್ಕುಮಾರ್, ಪಂಚಾಕ್ಷರಿ, ಬಿ.ಬಿ ಮಂಜುನಾಥ್, ಸಂಜಯಗೌಡ, ಪರೀಕ್ಷಿತ್ ಜಾವಳಿ, ಜಗದೀಶ್ಗೌಡ, ಶಶಿಧರ್, ಜಗದೀಪ್ ಮುಂತಾದವರು ಇದ್ದರು.










