ಚಿಕ್ಕಮಗಳೂರು – ಅಮೂಲ್ಯ ಪ್ರಾಣಿಗಳ ಬೇಟೆಯಾಡುತ್ತಿದ್ದ ಪ್ರಾಣಿ ಭಕ್ಷಕರ ಜಾಲವನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ಲಕ್ಕವಳ್ಳಿ ವಿಭಾಗದ ಅರಣ್ಯಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಬಂಧಿತರಿಂದ. 4 ಕೆ ಜಿ ಆನೆ ದಂತ, 16 ಕೆ ಜಿ ಜಿಂಕೆ ಕೊಂಬು, 5 ಕೆ ಜಿ ಕಾಡುಕೋಣದ ಕೊಂಬು, 11 ಕೆ ಜಿ ಚಿಪ್ಪುಹಂದಿ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಪ್ರಾಣಿಗಳ ಪಳೆಯುಳಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಸತೀಶ್, ಸೇಟು ಆಲಿಯಾಸ್ ರಾಜಕಣ್ಣಾ, ಸಂತೋಷ್ , ಕಣ್ಣಪ್ಪನ್ ಹಾಗೂ ತರೀಕೆರೆ ಮೂಲದ ರವಿ ಹಾಗೂ ಲಕ್ಷ್ಮಣ್ ಎಂಬುವರನ್ನು ಬಂಧಿಸಲಾಗಿದ್ದು ವಿಚಾರಣೆ ವೇಳೆ ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.ಇನ್ನು ಬಂಧಿತರು ಅಮೂಲ್ಯ ಪ್ರಾಣಿಗಳ ಪಳೆಯುಳಿಕೆಗಳನ್ನು ಹೊರರಾಜ್ಯ ಸೇರಿದಂತೆ ವಿದೇಶಗಳಿಗೆ ರವಾನೆ ಮಾಡುತ್ತಿದ್ದರು ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಇನ್ನು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.