ನವದೆಹಲಿ: ದೆಹಲಿ-ಎನ್ಸಿಆರ್, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಪ್ರಬಲ ಭೂಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಮಧ್ಯಾಹ್ನ 2:15ರ ವೇಳೆಗೆ ನೇಪಾಳದಲ್ಲಿ 6.5 ತೀವ್ರತೆಯಲ್ಲಿ ಭೂಮಿ ಕಂಪಿಸಿತು. ಇದರ ಪರಿಣಾಮ ದೆಹಲಿ ಮತ್ತು ಎನ್ಸಿಆರ್ನಲ್ಲಿ 4.2 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದಕ್ಕೂ ಮುನ್ನ ಹರಿಯಾಣದಲ್ಲಿ 2.7 ತೀವ್ರತೆಯಲ್ಲಿ ಮತ್ತು 3.0 ತೀವ್ರತೆಯಲ್ಲಿ ಅಸ್ಸಾಂನಲ್ಲಿ ಭೂಕಂಪನ ಸಂಭವಿಸಿತು.
ಇಂಡೋ, ನೇಪಾಳ, ಚೀನಾ ಗಡಿಯಲ್ಲಿ ಸರಣಿ ಭೂಕಂಪನಗಳು ಸಂಭವಿಸುತ್ತಿದೆ. ನಿನ್ನೆ ರಾತ್ರಿ ಮಯನ್ಮಾರ್ನಲ್ಲಿ ಭೂಮಿ ಕಂಪಿಸಿದ್ದು, ಇದರ ಪರಿಣಾಮ ಈಶಾನ್ಯ ಭಾರತದಲ್ಲೂ ಭೂಕಂಪನದ ಅನುಭವವಾಯಿತು. ಜನರು ಪ್ರಬಲ ಭೂಕಂಪನವನ್ನು ಅನುಭವಿಸಿದಾಗ ಕಟ್ಟಡಗಳಿಂದ ಹೊರಗೆ ಧಾವಿಸಿದರು.
ನೆಲ ಮಹಡಿಯಲ್ಲಿದ್ದ ಜನರಿಗೆ ಭೂಕಂಪನದ ಅನುಭವಗಳು ಆಗಿಲ್ಲ. ಬಹು ಅಂತಸ್ತಿನ ಕಟ್ಟಡಗಳಲ್ಲಿದ್ದ ಜನರಿಗೆ ಭೂಕಂಪನದ ತೀವ್ರತೆ ಅರಿವಾಗಿದ್ದು, ಕಂಪ್ಯೂಟರ್, ಲ್ಯಾಪ್ಟಾಪ್, ಮೇಜು, ಕುರ್ಚಿಗಳು ಅಲುಗಾಡುತ್ತಿದ್ದಂತೆ ಕಟ್ಟಡಗಳಿಂದ ಹೊರ ಬಂದಿದ್ದಾರೆ.










