ಬೆಂಗಳೂರು : ಡೆತ್ನೋಟ್ ಬರೆದು ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಮಾದನಾಯಕನ ಹಳ್ಳಿ ಬಳಿಯ ಪ್ರಕೃತಿ ಬಡಾವಣೆಯಲ್ಲಿ ನಡೆದಿದೆ.
ವಸಂತ(40), ಯಶವಂತ್ (15) ಹಾಗೂ ನಿಶ್ಚಿತಾ (6) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ರೂಮಿನಲ್ಲಿ ಮಗ ಇನ್ನೊಂದು ಕೊಠಡಿಯಲ್ಲಿ ತಾಯಿ, ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಿಂದ ಯಾರೂ ಹೊರಬರದಿರುವುದರಿಂದ ಸಂಶಯಗೊಂಡ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಮಾದನಾಯಕನ ಹಳ್ಳಿ ಪೊಲೀಸರು ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಸಂತ ಪತಿ ಪ್ರಸನ್ನಕುಮಾರ್ ವರ್ಷದ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದರು. ಅಂದಿನಿಂದ ಕುಟುಂಬ ಮಾನಸಿಕವಾಗಿ ನೊಂದಿತ್ತು ಎಂದು ಹೇಳಲಾಗಿದೆ.
ಡೆತ್ನೋಟ್ ನಲ್ಲಿ ಏನಿದೆ?
ಮಕ್ಕಳನ್ನು ಬಿಟ್ಟು ನಾನು ಒಬ್ಬಳೇ ಸಾಯಲು ತಯಾರಿಲ್ಲ. ಮನೆ ಖರೀದಿಗೆ ಸಾಲ ಮಾಡಿದ್ದೇವೆ. ಮನೆಯನ್ನು ಮಾರಾಟ ಮಾಡಿ ಸಾಲ ತೀರಿಸಿ. ಉಳಿದ ಹಣವನ್ನು ಅನಾಥಾಶ್ರಮಕ್ಕೆ ನೀಡಿ ಎಂದು ವಸಂತಾ 2 ಪುಟಗಳ ಡೆತ್ನೋಟ್ ಬರೆದಿದ್ದಾರೆ.










