ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಿದ್ದರಾಮಯ್ಯ ಅವರ ಚೇಲಾ, ಬಕೆಟ್ ಎಂದು ಎಸ್.ಟಿ ಸೋಮಶೇಖರ್ ಅವರು ಹೇಳಿರುವುದು ಸರಿಯಾಗಿದೆ ಎಂದು ಅನರ್ಹ ಶಾಸಕ ಡಂಟಿಬಿ ನಾಗರಾಜ್ ಅವರು ಹೇಳಿದ್ದಾರೆ. ಚುನಾವಣಾ ಆಯೋಗ ಉಪಚುನಾವಣೆಗೆ ಹೊಸ ದಿನಾಂಕವನ್ನು ಘೋಷಣೆ ಮಾಡಿದ್ದು, ಡಿಸೆಂಬರ್ 5ರಂದು ಚುನಾವಣೆ ನಡೆಯಲಿದೆ. ಈ ಕುರಿತು ಚರ್ಚಿಸಲು ಎಂಟಿಬಿ ನಾಗರಾಜು ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಚುನಾವಣಾ ಆಯೋಗ ಮತ್ತೆ ಉಪಚುನಾವಣೆಗೆ ದಿನಾಂಕ ನಿಗದಿಮಾಡಿದ್ದು, ನಾವು ಉಪಚುನಾವಣೆಯನ್ನು ಎದುರಿಸಲು ಸಿದ್ದರಿದ್ದೇವೆ. ಬಿಜೆಪಿ ಪಕ್ಷ ಸೇರ್ಪಡೆ ವಿಚಾರವನ್ನು ಸುಪ್ರೀಂ ಕೋರ್ಟ್ ಆದೇಶದ ಬಳಿಕ ತೀರ್ಮಾನಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಿದ್ದರಾಮಯ್ಯ ಅವರ ಚೇಲಾ, ಬಕೆಟ್ ಎಂಬ ಸೋಮಶೇಖರ್ ಅವರ ಹೇಳಿಕೆ ಸರಿಯಾಗಿಯೇ ಇದೆ. ಸೋಮಶೇಖರ್ ಅವರ ಹೇಳಿಕೆಗೆ ನನ್ನ ಸಹಮತ ಕೂಡ ಇದೆ. ಅಲ್ಲದೇ ಮುನಿಯಪ್ಪ ಅವರು ಹೇಳಿರುವುದು ನಿಜ. ಮುನಿಯಪ್ಪ ಅವರನ್ನು ಸೋಲಿಸುವುದಕ್ಕೆ ಯಾರೆಲ್ಲಾ ಕೆಲಸ ಮಾಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ರಮೇಶ್ ಕುಮಾರ್ ಅವರು ಮುನಿಯಪ್ಪ ಅವರನ್ನು ಸೋಲಿಸಲು ಕೆಲಸ ಮಾಡಿದ್ದಾರೆ ಎಂದರು.










