ನವದೆಹಲಿ : ಹೊಸ ವರ್ಷದಂದು ದೆಹಲಿಯ ಕಾಂಜಾವಾಲಾದಲ್ಲಿ ಭೀಕರ ಅಪಘಾತಕ್ಕೆ 20ರ ಯುವತಿಯ ಸಾವನ್ನಪ್ಪಿದ ಆಘಾತಕಾರಿ ಘಟನೆಯ ಬೆನ್ನಲ್ಲೇ ಮತ್ತೊಂದು ಘಟನೆ ದೆಹಲಿಯನ್ನು ಬೆಚ್ಚಿ ಬೀಳಿಸಿದೆ. ಪ್ರೀತಿಯನ್ನು ಮುಂದುವರೆಸಲು ಒಪ್ಪದ ಕಾರಣ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ವಾಯುವ್ಯ ದೆಹಲಿಯ ಆದರ್ಶ್ ನಗರದಲ್ಲಿ ನಡೆದಿದೆ.
ಆರೋಪಿಯನ್ನು ಸುಖ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಪೊಲೀಸರು ಹರಿಯಾಣದ ಅಂಬಾಲಾದಲ್ಲಿ ಬಂಧಿಸಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ 22 ವರ್ಷದ ಯುವತಿಯನ್ನು ಪ್ರಸ್ತುತ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ ಯುವತಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು, ಕಳೆದ 5 ವರ್ಷಗಳಿಂದ ಸುಖ್ವಿಂದರ್ ಜೊತೆ ಸಂಬಂಧ ಹೊಂದಿದ್ದಳು. ಆದರೆ ಜನವರಿ 2 ರಂದು ಇಬ್ಬರು ಜಗಳ ಮಾಡಿಕೊಂಡಿದ್ದು, ಆಕೆ ಸ್ನೇಹವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದಾಳೆ. ಇದಕ್ಕೆ ಕೋಪಗೊಂಡ ಸುಖ್ವಿಂದರ್ ಯುವತಿಗೆ 3-4 ಬಾರಿ ಚಾಕುವಿನಿಂದ ಇರಿದಿದ್ದಾನೆ. ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.










