ಬೆಂಗಳೂರು : ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ, ದಯವಿಟ್ಟು ನಿಮ್ಮ ರಾಜಕೀಯ ಉದ್ದೇಶದ ನಡಿಗೆ ಕಾರ್ಯಕ್ರಮವನ್ನು ಕೈಬಿಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕರಿಗೆ ಪತ್ರಿಕಾ ಹೇಳಿಕೆ ಮೂಲಕ ಕರೆ ನೀಡಿದ್ದಾರೆ.
ಇವರು ಪಾದಯಾತ್ರೆ ಆರಂಭಿಸಿದಾಗ ನಮಗೆ ಸಾರ್ವಜನಿಕರ ಆರೋಗ್ಯದ ಮೇಲೆ ಬೀರಬಹುದಾದ ಅಡ್ಡ ಪರಿಣಾಮದ ಬಗ್ಗೆ ಆತಂಕ ಇತ್ತು. ಆ ಕಾರಣದಿಂದ ನಾವು ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದೆವು. ಈಗ ನಮ್ಮ ಆತಂಕ ನಿಜವಾಗುತ್ತಿದೆ, ಕೊರೊನಾ ಬಗ್ಗೆ ಕಾಂಗ್ರೆಸ್ ನಾಯಕರು ಅಪ ಪ್ರಚಾರ ಮಾಡುತ್ತಿರುವುದಲ್ಲದೆ ವಿತಂಡ ವಾದ ಮಂಡಿಸುತ್ತಿದ್ದಾರೆ.
ಪಾದಯಾತ್ರೆಯಲ್ಲಿ ತೊಡಗಿಕೊಂಡಿದ್ದ ಕೆಲವು ನಾಯಕರಿಗೆ ಸೋಂಕು ತಗುಲಿದ್ದು, ಆಸ್ಪತ್ರೆಗೆ ಸೇರಿದ್ದಾರೆ. ಆ ಕಾರಣದಿಂದ ಮತ್ತೊಮ್ಮೆ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತೇನೆ, ನಿಮ್ಮ ನಿರ್ಧಾರವನ್ನು ಕೂಡಲೇ ಬದಲಿಸಿ ಪಾದಯಾತ್ರೆಯನ್ನು ಕೈಬಿಡಿ. ಕೊರೊನಾ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ. ಸಮಾಜದ ಎಲ್ಲಾ ಜನರು ವಿಶೇಷವಾಗಿ ಎಲ್ಲಾ ಕ್ಷೇತ್ರದ ಶ್ರಮಿಕ ವರ್ಗದವರು ಆತಂಕಗೊಂಡಿದ್ದಾರೆ. ಈಗಾಗಲೇ ನೀವು ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದು, ಅವರ ಬಳಿ ಕ್ಷಮೆ ಕೇಳಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.










