ಪುತ್ತೂರು: ಗಣೇಶೋತ್ಸವ ಕಾರ್ಯಕ್ರಮದಲ್ಲೇ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು…

283
firstsuddi

ಪುತ್ತೂರು: ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳು ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಪುತ್ತೂರಿನ ಸಂಪ್ಯ ಬಳಿ ಮಂಗಳವಾರ ಜರುಗಿದೆ. ಮೃತ ಯುವಕನನ್ನು ಸಂಪ್ಯ ನಿವಾಸಿ ಮೇರ್ಲ ರಮೇಶ್ ಸುವರ್ಣರ ಪುತ್ರ ಕಾರ್ತಿಕ್ ಮೇರ್ಲ ಎಂದು ಗುರುತಿಸಲಾಗಿದೆ. ಈತ ಪುತ್ತೂರು ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿಯಾಗಿದ್ದರು. ಮಂಗಳವಾರ ರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ದುಷ್ಕರ್ಮಿಗಳು ಸಂಪ್ಯ ಬಳಿಯಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಕಾರ್ಯಕ್ರಮದ ಬಳಿ ನುಗ್ಗಿದ್ದು ಕಾರ್ತಿಕ್ ಮೇರ್ಲರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ತೀವ್ರ ಗಾಯಗೊಂಡ ಕಾರ್ತಿಕ್ ಅವರನ್ನು ರಿಕ್ಷಾದಲ್ಲಿ ಸ್ಥಳೀಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದರೂ ದಾರಿಯಲ್ಲೇ ಅವರು ಮೃತಪಟ್ಟಿದ್ದಾರೆ. ಕೊಲೆಗೆ ಹಿಂದಿನ ವೈಷಮ್ಯವೇ ಕಾರಣ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.