ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು…

511
firstsuddi

ಬೆಂಗಳೂರು : ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಮೇ 6ರಂದು ವ್ಯಕ್ತಿ ಮೆಟ್ರೋ ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋಗುವಾಗ ಬೀಪ್ ಸೌಂಡ್ ಬಂದಿದ್ದು, ತಕ್ಷಣ ಅವರನ್ನು ಅಲ್ಲಿಯೇ ನಿಲ್ಲುವಂತೆ ಸೂಚಿಸಿದರೂ ನಿಲ್ಲದ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದರು. ಬಳಿಕ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಅವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿ ವ್ಯಕ್ತಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ಬಳಿಕ ಆ ವ್ಯಕ್ತಿ ರಾಜಸ್ಥಾನ ಮೂಲದ ಶಾಜಿದ್ ಖಾನ್ ಎಂದು ತಿಳಿದು ಬಂದಿದ್ದು, ರಂಜಾನ್ ಹಬ್ಬದ ಅಂಗವಾಗಿ ಶಾಜಿದ್ ಖಾನ್ ಹಾಗೂ ಅವರ ಕುಟುಂಬ ಮಸೀದಿ ಬಳಿ ದಾನವನ್ನು ಪಡೆಯಲು ಬಂದಿದ್ದು, ಈ ಸಂದರ್ಭದಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋಗುವಾಗ ಅವರ ಬಳಿ ಇದ್ದ ಕಾಯಿನ್ ಹಾಗೂ ಕೈಗೆ ಕಟ್ಟಿದ್ದ ತಾಯ್ತಗಳು ಮೆಟಲ್ ಆಗಿದ್ದರಿಂದ ಶಬ್ದ ಬಂದಿದ್ದು, ಅವರಿಗೆ ಭಾಷೆ ಬರದ ಕಾರಣ ಹಾಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.