ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದ ಲಾಕ್ ಡೌನ್ ಜಾರಿಯಲ್ಲಿದ್ದರೂ ಬೇಕರಿ, ಬಿಸ್ಕೆಟ್, ಕಾಂಡಿಮೆಂಟ್ಸ್ ಉತ್ಪನ್ನಗಳ ತಯಾರಿ, ಸಾಗಣೆ ಮತ್ತು ಸಗಟು ಮಾರಾಟಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಸಿದೆ. ಈ ಬಗ್ಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ವಸ್ತುಗಳ ಪೊರೈಕೆ ಮತ್ತು ಸಾಗಣೆ ಜಾಲದ ನೋಡಲ್ ಅಧಿಕಾರಿ ರಾಜೇಂದ್ರ ಕಟಾರಿಯ ಪತ್ರ ಬರೆದಿದ್ದಾರೆ. ಇಂಥ ಘಟಕಗಳು ಉದ್ಯೋಗಿಗಳ ಆರೋಗ್ಯ, ಶುಚಿತ್ವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು. ತಮ್ಮ ಆವರಣದಲ್ಲಿ ಯಾವುದೇ ವಸ್ತುಗಳನ್ನು ಮಾರಾಟ ಮಾಡದೆ ಪಾರ್ಸೆಲ್ ನೀಡಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೇಕರಿ ವಸ್ತುಗಳು ಅಗತ್ಯ ವಸ್ತುಗಳ ವ್ಯಾಪ್ತಿಯಲ್ಲಿದ್ದು, ರೋಗಿಗಳು, ಹಿರಿಯರು, ಮಕ್ಕಳು ಸಾರ್ವಜನಿಕರಿಗೆ ಅಗತ್ಯವಾಗಿದೆ. ಆದರೆ ಲಾಕ್ ಡೌನ್ ಘೋಷಿಸಿದ ಬಳಿಕ ಈ ವಸ್ತುಗಳನ್ನು ಉತ್ಪಾದಿಸುವ ಘಟಕಗಳು ಸ್ಥಗಿತಗೊಂಡಿದ್ದವು.










