ಕಲಬುರಗಿ : ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದೆ ಶೋಭ ಕರಂದ್ಲಾಜೆ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ನಾಯಕ ವಿಶ್ವನಾಥ್ ಅವರು ಸಮ್ಮಿಶ್ರ ಸರ್ಕಾರದ ಒಳಬೇಗುದಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರ ಕುರಿತು ಸತ್ಯವನ್ನೇ ಹೇಳಿದ್ದಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರು. ಆದರೆ ಅವರು ಜಾತಿ ಜಾತಿಯಲ್ಲಿ ಜಗಳ ಆಗುವಂತೆ ಮಾಡಿದರು. ಸಿದ್ದರಾಮಯ್ಯ ಅವರ ಮೊಸಳೆ ಕಣ್ಣೀರಿನಿಂದ ಕೆಲಸ ಆಗುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದು ಸರಿಯಿಲ್ಲ ಎಂಬುವುದಕ್ಕೆ ವಿಶ್ವನಾಥ್ ಅವರ ಹೇಳಿಕೆಯೇ ಸಾಕ್ಷಿ. ಸಮ್ಮಿಶ್ರ ಸರ್ಕಾರದಿಂದ ಯಾವಾ ಕ್ಷೇತ್ರದಲ್ಲೂ ಹೊಂದಾಣಿಕೆಯಿಂದ ಪ್ರಚಾರ ನಡೆದಿಲ್ಲ. ಜೆಡಿಎಸ್ ಪಕ್ಷದವರು ಕೇವಲ 7 ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ಮಾಡುವುದಕ್ಕೆ ಸೀಮಿತರು. ಸಮ್ಮಿಶ್ರ ಸರ್ಕಾರದ ಈ ಒಳಜಗಳದಿಂದ ರಾಜ್ಯದ ಜನರು ಕಷ್ಟಪಡುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಸ್ಪರ್ಶಜ್ಞಾನ ಇಲ್ಲ, ಕಣ್ಣು ಕಾಣುವುದಿಲ್ಲ ಹಾಗೂ ಕಿವಿಯೂ ಕೇಳುವುದಿಲ್ಲ. ರಾಜ್ಯ ಸರ್ಕಾರ ಗಾಢವಾದ ನಿದ್ರೆಗೆ ಜಾರಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೆಸಾರ್ಟ್ ವಾಸ್ತವ್ಯ ಹೂಡಿದ್ದಾರೆ ಎಂದು ಕಿಡಿಕಾರಿದ್ದಾರೆ.










