ಬೆಂಗಳೂರು : ಸೆ.27ರ ಭಾರತ್ ಬಂದ್ ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಪೂರ್ಣ ಬೆಂಬಲ ಘೋಷಿಸುತ್ತದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತಿಳಿಸಿದ್ದಾರೆ.
ಒಕ್ಕೂಟ ಸರ್ಕಾರವು ವಿವಾದಿತ ಕೃಷಿ ಕಾನೂನು ಜಾರಿಗೆ ತಂದು ಒಂದು ವರ್ಷವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ರಾಜಧಾನಿ ದೆಹಲಿ ಗಡಿಯಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನಾ ನಿರತವಾಗಿವೆ. ಲಕ್ಷಾಂತರ ಸಂಖ್ಯೆಯ ರೈತಾಪಿ ವರ್ಗಗಳು ಸುಮಾರು ಒಂದು ವರ್ಷದಿಂದ ವಿರೋಧ ಪ್ರದರ್ಶನ ನಡೆಸುತ್ತಿದ್ದರೂ, ಒಕ್ಕೂಟ ಸರ್ಕಾರವು ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಆದರೂ ಧೃತಿಗೆಡದ ರೈತರು ಎಲ್ಲಾ ಸಂಕಷ್ಟಗಳನ್ನು ಎದುರಿಸಿಕೊಂಡು ಪ್ರತಿಭಟನೆಯನ್ನು ಮುಂದುವರಿಸಿರುವುದು ಆಶಾದಾಯಕವಾಗಿದ್ದು, ಕಾರ್ಪೋರೇಟ್ ಕುಳಗಳಿಗಷ್ಟೇ ಅಪಾರ ಲಾಭ ತಂದು ಕೊಡುವ ಕರಾಳ ಕೃಷಿ ಕಾಯ್ದೆಗಳು ಕೇವಲ ರೈತರಿಗಷ್ಟೇ ಅಲ್ಲ, ಒಟ್ಟು ದೇಶಕ್ಕೆ ಮಾರಕವಾಗಿದೆ. ಈ ನಿಟ್ಟಿನಲ್ಲಿ, ದೇಶದ ಜೀವಾಳವಾಗಿರುವ ಕೃಷಿಕ ವರ್ಗವು ಮಳೆ ಬಿಸಿಲನ್ನು ಲೆಕ್ಕಿಸದೇ ಮುನ್ನಡೆಸುತ್ತಿರುವ ಹೋರಾಟದೊಂದಿಗೆ ಕೈಜೋಡಿಸುವುದು ಪ್ರತಿಯೋರ್ವ ನಾಗರಿಕನ ಹೊಣೆಗಾರಿಕೆಯಾಗಿರುತ್ತದೆ. ರೈತರ ಎಲ್ಲಾ ರೀತಿಯ ಹೋರಾಟಗಳೊಂದಿಗೆ ಪಾಪ್ಯುಲರ್ ಫ್ರಂಟ್ ಐಕಮತ್ಯವನ್ನು ವ್ಯಕ್ತಪಡಿಸುತ್ತದೆ ಎಂದು ಯಾಸಿರ್ ಹಸನ್ ತಿಳಿಸಿದ್ದಾರೆ.










