ಚಿತ್ರದುರ್ಗ: ಸ್ವಾಮೀಜಿಗಳು ಆಶೀರ್ವಾದ ಮಾಡಿದರೆ, ಇವನು ಯೋಗ್ಯ ಅಂದ್ರೆ ಜನರು ಗ್ಯಾರಂಟಿ ವೋಟ್ ಹಾಕುತ್ತಾರೆ ಅಂತ ಹೇಳುತ್ತಾರೆ. ಹಾಗಾಗಿ ಸ್ವಾಮೀಜಿಗಳು ಅಯೋಗ್ಯರ ಪರ ಪ್ರಚಾರ ಮಾಡಬೇಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು. ಚಿತ್ರದುರ್ಗದ ಭರಮಸಾಗರದಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮೀಜಿಗಳೇ ನೀವು ಅಯೋಗ್ಯರ ಪರ ನೀವು ಯಾಕೆ ಪ್ರಚಾರ ಮಾಡುತ್ತೀರಾ, ಇನ್ಮೇಲೆ ಇಂತಹ ಕೆಲಸ ಮಾಡಬೇಡಿ. ಈಗಿರುವ ಪಕ್ಷಗಳು ಯೋಗ್ಯವಲ್ಲ ಅಂತ ಬಹಿರಂಗವಾಗಿ ಆಗದಿದ್ರೆ ಗುಟ್ಟಾಗಿಯಾದರು ನೀವು ಹೇಳಬೇಕು ಎಂದರು. ಕಾಂಗ್ರೆಸ್ನಲ್ಲಿ ಸಿಎಂ ಯಾರಾಗಬೇಕು, ಯಾರನ್ನು ಕಿತ್ತುಹಾಕಬೇಕೆಂಬ ಹೋರಾಟ ನಡೆಯುತ್ತಿದೆ. ವಿಪಕ್ಷದಲ್ಲಿ ಪಾರ್ಟಿ ಅಧ್ಯಕ್ಷ ಯಾರಾಗಬೇಕು, ಆಗದೇ ಇರೋರು ಯಾರಾಗಬೇಕು ಅಂತಿದ್ರೆ, ಇನ್ನೊಬ್ರು ಹೇಳುತ್ತಾರೆ ಯಾರು ಹೇಗಾದರೂ ಹಾಳಾಗಲಿ ನಾನು, ನನ್ನ ಮಗ, ಮೊಮ್ಮಗ ಏನು ಬೇಕಾದರು ಆಗಲು ಅನುಕೂಲ ಮಾಡಿಕೊಡಿ ಅಂತ ಹೇಳುತ್ತಾರೆ ಎಂದು 3 ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.










