ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಿರಾಶ್ರಿತರ ಸಚಿವ ಖಲೀಲ್ ಉರ್-ರಹಮಾನ್ ಹಕ್ಕಾನಿ ಹಾಗೂ ಇತರ ಇಬ್ಬರು ಸಾವನ್ನಪ್ಪಿದ್ದಾರೆ. ಇದು ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್ ಹಿರಿಯ ಅಧಿಕಾರಿ ಮೇಲಿನ ಅತ್ಯಂತ ಮಹತ್ವದ ದಾಳಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಚಿವಾಲಯದ ಆವರಣದಲ್ಲೇ ಸ್ಫೋಟ ಸಂಭವಿಸಿದ್ದು, ನಿರಾಶ್ರಿತರ ಸಚಿವ ಖಲೀಲ್ ಹಕ್ಕಾನಿ ಹತರಾಗಿದ್ದಾರೆ. ಇವರು ತಾಲಿಬಾನ್ ಆಡಳಿತದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕನಾಗಿರುವ ಗೃಹ ಸಚಿವ ಸಿರಾಜುದ್ದೀನ್ ಹಕ್ಕಾನಿಯವರ ಚಿಕ್ಕಪ್ಪ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಸದ್ಯಕ್ಕೆ ಹೊತ್ತುಕೊಂಡಿಲ್ಲ. ಈ ಕುರಿತು ತಾಲಿಬಾನ್ ಸರ್ಕಾರದ ಪ್ರಾಥಮಿಕ ವಕ್ತಾರರಾದ ಜಬಿಹುಲ್ಲಾ ಮುಜಾಹಿದ್ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಹಕ್ಕಾನಿ ಅವರ ಮರಣವು ಅತ್ಯಂತ ಗಮನಾರ್ಹವಾದುದು. ಇಸ್ಲಾಂ ಧರ್ಮ ರಕ್ಷಣೆಗಾಗಿ ಹಕ್ಕಾನಿ ಜೀವವನ್ನೇ ಮುಡಿಪಾಗಿಟ್ಟಿದ್ದರು. ಅವರೊಬ್ಬ ನಿಜವಾದ ಧಾರ್ಮಿಕ ಯೋಧ ಎಂದು ಬಣ್ಣಿಸಿದ್ದಾರೆ. ಇನ್ನೂ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಖಂಡಿಸಿದ್ದಾರೆ. ಪಾಕಿಸ್ತಾನವು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆಯನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.