ಉಡುಪಿ : ನಾಳೆಯಿಂದ ಐದು ದಿನಗಳ ಕಾಲ ಉಡುಪಿ ಜಿಲ್ಲೆಯ 35 ಗ್ರಾಮ ಪಂಚಾಯತ್ ಗಳು ಸಂಪೂರ್ಣ ಲಾಕ್ ಆಗಲಿವೆ ಎಂದು ಡಿಸಿ ಜಿ.ಜಗದೀಶ್ ಹೇಳಿದ್ದಾರೆ.
ಮುಂದಿನ ಐದು ದಿನಗಳ ಕಾಲ ಅಗತ್ಯ ವಸ್ತು ಖರೀದಿಗೂ ಕೂಡ ಅವಕಾಶ ಇರುವುದಿಲ್ಲ. ಕೇವಲ ಹಾಲು, ಮೆಡಿಕಲ್ ಶಾಪ್ ಮತ್ತು ಆಸ್ಪತ್ರೆಗಳಿಗೆ ಮಾತ್ರ ಅವಕಾಶ ಇದ್ದು ಅಗತ್ಯ ವಸ್ತುಗಳಿಗೂ ಗ್ರಾಮಸ್ಥರು ಮನೆಯಿಂದ ಹೊರಗಡೆ ಹೋಗುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ನಿನ್ನೆ ಈ ಸಂಬಂಧ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಜನಪ್ರತಿನಿಧಿಗಳ ಜೊತೆ ಸೇರಿ ಈ ನಿರ್ಣಯ ಕೈಗೊಂಡಿದ್ದೇವೆ. ಐವತ್ತಕ್ಕೂ ಹೆಚ್ಚು ಪಾಸಿಟಿವ್ ಇರುವ ಗ್ರಾಮಪಂಚಾಯಿತ್ ಗಳಲ್ಲಿ ನೋಡಿಕೊಳ್ಳಲು ಅಗತ್ಯ ಕಾರ್ಯ ಪಡೆಗಳನ್ನು ರಚಿಸಿದ್ದೇವೆ. ಗ್ರಾಮಸ್ಥರು ಇದಕ್ಕೆ ಸಹಕರಿಸಬೇಕು. ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ವಿನಾಯಿತಿಗಳು : ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್ಸ್, ಕ್ಲಿನಿಕಲ್ ಲ್ಯಾಬ್, ಟೆಲಿಮೆಡಿಸಿನ್ ಸೌಲಭ್ಯಗಳು, ಔಷಧಾಲಯಗಳು, ಜನ ಔಷಧಿ ಕೇಂದ್ರಗಳು, ರಕ್ತ ಸಂಗ್ರಹ ಕೇಂದ್ರಗಳು, ಹಾಲಿನ ಬೂತು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪೆಟ್ರೋಲ್ ಬಂಕ್ ಗಳು ಕಾರ್ಯಚರಿಸಲು ಅನುಮತಿಸಿದೆ. ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳು. ಅಗತ್ಯ ತುರ್ತು ವೈದ್ಯಕೀಯ ಸೇವೆಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ. ಈಗಾಗಲೇ ವಿವಾಹ ಸಮಾರಂಭಕ್ಕೆ ನೀಡಿರುವ ಅನುಮತಿಯಂತೆ, ವಿವಾಹ ಸಮಾರಂಭಗಳನ್ನು ನಡೆಸಲು ಅವಕಾಶವಿರುತ್ತದೆ.
ನಾಳೆ ಬೆಳಗ್ಗೆ 6 ರಿಂದ ಜೂನ್ 7ರ ಬೆಳಗ್ಗೆ 6 ಗಂಟೆಯವರೆಗೆ ಮೇಲ್ಕಂಡ ಆದೇಶ ಜಾರಿಯಲ್ಲಿರುತ್ತವೆ.
ಸಂಪೂರ್ಣ ಲಾಕ್ ಡೌನ್ ಗೊಳಗಾಗುವ ಗ್ರಾಮಗಳು
ಕುಂದಾಪುರ-ಬೈಂದೂರು ತಾಲ್ಲೂಕಿನ: ಶಿರೂರು, ಜಡ್ಕಲ್, ಕಂಬದಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ-ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು ಕುಂಜ್ಞಾಡಿ, ಆಜ್ರಿ, ಆಲೂರು.
ಉಡುಪಿ, ಬ್ರಹ್ಮಾವ, ಕಾಪು ತಾಲ್ಲೂಕಿನ: 38 ಕಳತ್ತೂರು, 80 ಬಡಗುಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು, ಬೆಳಪು, ಬೆಳ್ಳೆ, ಪಡುಬಿದ್ರಿ, ಶಿರ್ವ.
ಕಾರ್ಕಳ, ಹೆಬ್ರಿ ತಾಲ್ಲೂಕಿನ: ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್ಣು, ಬೆಳ್ವೆ, ಮುದ್ರಾಡಿ, ವರಂಗ.










