ಮೈಸೂರು: ಎಟಿಎಂಗೆ ಹಣ ತುಂಬದೇ ತೆಗೆದುಕೊಂಡ ಹೋದ ಆರೋಪದಲ್ಲಿ ಮೈಸೂರು ಜಿಲ್ಲೆಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಎಂಬವರ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಎಲ್ ಎಂಟರ್ಪ್ರೈಸಸ್ನಲ್ಲಿ ಅಕ್ಷಯ್ ಕೆಲಸ ಮಾಡುತ್ತಿದ್ದ. ಟಿಎಲ್ ಎಂಟರ್ಪ್ರೈಸಸ್, ಎಟಿಎಂಗೆ ಹಣ ತುಂಬುವ ಏಜೆನ್ಸಿ ಪಡೆದಿತ್ತು. ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಅಕ್ಷಯ್ ಹಣವನ್ನು ತುಂಬುತ್ತಿದ್ದ. ಕಂಪನಿ ಪರವಾಗಿ ಹೋಗಿ ಹಣ ತುಂಬುವ ಕೆಲಸ ಮಾಡುತ್ತಿದ್ದ. ಕಂಪನಿ ಆಡಿಟ್ ಮಾಡಿದಾಗ ಹಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಕ್ಯಾಶ್ ಲೋಡಿಂಗ್ ಎಟಿಎಂ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ, ಆಕ್ಷಯ್ ಎಟಿಎಂಗೆ ಹಣ ಹಾಕದೆ ಬ್ಯಾಗ್ನಲ್ಲಿ ತುಂಬಿಕೊಂಡು ಹೋದ ದೃಶ್ಯ ಸೆರೆಯಾಗಿದೆ. ಗದ್ದಿಗೆ ಗ್ರಾಮದ ಎಟಿಎಂನಲ್ಲಿ 5.80 ಲಕ್ಷ ರೂಪಾಯಿ ಹಣವನ್ನು ಲೋಡ್ ಮಾಡಿರುವುದಿಲ್ಲ. ಈ ಕೃತ್ಯಕ್ಕೆ ಆತನ ಪರಿಚಯದ ತೇಜಸ್ವಿನಿ ಎಂಬಾಕೆಯ ಕುಮ್ಮಕ್ಕು ಆರೋಪ ಕೇಳಿಬಂದಿದೆ. ಇಬ್ಬರೂ ಈ ಹಣದಿಂದ ಚಿನ್ನ ಖರೀದಿಸಿರುವ ಕುರಿತು ವರದಿ ಲಭ್ಯವಾಗಿದೆ. ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆ ಇಬ್ಬರು ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ.










