ಕಳಸ : ವಿಜ್ಞಾನಿಗಳು ಪ್ರತೀ ತಿಂಗಳಿಗೊಮ್ಮೆ ಬೇಟಿ ನೀಡಿ ಪರಿಶೀಲನೆ ಮಾಡಿ ರೈತರ ಬೆಂಬಲಕ್ಕೆ ನಿಲ್ಲಬೇಕು : ಕೆ.ಆರ್.ಪ್ರಭಾಕರ್.

126
firstsuddi

ಕಳಸ : ವಿಜ್ಞಾನಿಗಳು ಬಂದು ಕೇವಲ ಪರಿಶೀಲನೆ ಮಾಡುವುದಲ್ಲ, ಪ್ರತೀ ತಿಂಗಳಿಗೊಮ್ಮೆ ಬೇಟಿ ನೀಡಿ ಪರಿಶೀಲನೆ ಮಾಡಿ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್ ಹೇಳಿದರು.
ಸಂಸೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಅಡಕೆ ಬೆಳೆ ರೋಗಕ್ಕೆ ತುತ್ತಾದ ರೈತರಿಗೆ ತೋಟಗಾರಿಕಾ ಇಲಾಖೆಯಿಂದ ಉಚಿತ ಔಷದಿಯನ್ನು ವಿತರಣೆ ಮಾಡಿ ಮಾತನಾಡಿದ ಅವರು ರೈತರು ಕೃಷಿಯ ಮೇಲೆ ಅವಲಂಬಿತವಾಗಿ ನಿಂತಿದ್ದಾರೆ. ಆದರೆ ಅಡಕೆಗೆ ತಗುಲಿದ ರೋಗ ರೈತರ ಭವಿಷ್ಯವನ್ನು ನಾಶ ಮಾಡುತ್ತಿದೆ. ಅವರಿಗೆ ಇಲಾಖೆಯು ಬೆನ್ನುಲುಬಾಗಿ ನಿಂತು ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಪ್ರತಿಯೊಬ್ಬ ರೈತರು ಕೂಡ ತೋಟಗಳಿಗೆ ತಪ್ಪದೆ ಔಷದಿಯನ್ನು ಸಿಂಪಡಣೆ ಮಾಡಬೇಕು. ಸಿಂಪಡಣೆ ಮಾಡದವರನ್ನು ಪ್ರೇರೆಪಿಸಿ ಸಿಂಪಡನೆ ಮಾಡಿಸಬೇಕು.
ರೈತರ ವಿಷಯದಲ್ಲಿ ಯಾವುದೇ ರಾಜಕಾರಣ ಇಲ್ಲ. ಇದು ಪ್ರತಿಯೊಬ್ಬ ರೈತನ ಬದುಕಿನ ಪ್ರಶ್ನೆಯಾಗಿದೆ. ಸರ್ಕಾರದ ವ್ಯಾಪ್ತಿಯಲ್ಲಿ ನನ್ನ ಶಕ್ತಿ ಮೀರಿ ನಾನು ರೈತರಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ತೋಟಗಾರಿಕಾ ಉಪ ನಿರ್ದೇಶಕ ವೇದಮೂರ್ತಿ ಮಾತನಾಡಿ ನಾನು ಕೂಡ ರೈತನ ಮಗನೇ ಆಗಿರುವುದರಿಂದ ರೈತರ ಸಮಸ್ಯೆಗಳು ನನಗೆ ಅರ್ಥವಾಗುತ್ತದೆ. ಇಲಾಖೆಯು ರೈತರ ಬೆನ್ನೆಲುಬಾಗಿ ಖಂಡಿತ ನಿಲ್ಲುತ್ತದೆ. ಜಿಲ್ಲಾ ಪಂಚಾಯಿತಿ ಸದಸ್ಯರ ಸಹಕಾರದಿಂದ ಅರ್ಹ ರೈತರಿಗೆ ಉಚಿತವಾಗಿ ಔಷದಿಯನ್ನು ನೀಡುತ್ತಿದ್ದೇವೆ. ಇದನ್ನು ಸರಿಯಾದ ರೀತಿಯಲ್ಲಿ ತೋಟಗಳಿಗೆ ಬಳಸಿಕೊಳ್ಳಿ. ಅಲ್ಲದೆ ಇಲಾಖೆಯ ವತಿಯಿಂದ ಪ್ರತೀ ತಿಂಗಳಿಗೊಮ್ಮೆ ತೋಟಕ್ಕೆ ಬಂದು ಪರಿಶೀಲನೆ ಮಡುತ್ತೇವೆ. ತೋಟಕ್ಕೆ ತಗುಲಿದ ರೋಗದ ನಿಯಂತ್ರಣದ ಬಗ್ಗೆ ಪ್ರತಿಯೊಬ್ಬ ರೈತರಿಗೂ ತಲುಪುವಂತೆ ಬಿತ್ತಿಪತ್ರವನ್ನು ಹಂಚಿ ರೈತರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಮೋಹನ್, ತೋಟಗಾರಿಕ ಹಿರಿಯ ಸಹಾಯಕ ನಿರ್ದೇಶಕ ಜಯದೇವಪ್ಪ, ಕಳಸ ತೋಟಗಾರಿಕಾ ಇಲಾಖಾ ಅಧಿಕಾರಿ ಸಿ.ಚಂದ್ರಪ್ಪ ಇದ್ದರು.