ಚಿಕ್ಕಮಗಳೂರು : ಕಾಫಿನಾಡಿನಲ್ಲೂ ಹಿಜಾಬ್ ಹೈಡ್ರಾಮ ಮುಂದುವರೆದಿದ್ದು, ನಮಗೆ ಎಕ್ಸಾಂ ಬೇಡ, ಹಿಜಾಬ್ ಬೇಕು ಎಂದು ಎಕ್ಸಾಂ ಬಿಟ್ಟು ಮಕ್ಕಳು ಹೊರಗೆ ನಿಂತಿದ್ದರು. ಮಕ್ಕಳಿಗೆ ಪೋಷಕರು ಕೂಡ ಸಾಥ್ ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದಲ್ಲಿರುವ ಮೌಲನಾ ಅಬ್ದುಲ್ ಅಲ್ಪಸಂಖ್ಯಾತರ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ದಿನ ನಮಗೆ ಹಿಂದಿ ಎಕ್ಸಾಂ ನಡೆಯುತ್ತಿದೆ. ನಾವು ವೇಲ್ ತಲೆ ಮೇಲೆ ಧರಿಸಿದ್ದೇವೆ ಅನ್ನೋ ಕಾರಣಕ್ಕೆ ನಮ್ಮನ್ನ ಪರೀಕ್ಷೆಗೆ ಕೂರಿಸಿಲ್ಲ. ವೇಲನ್ನ ಮೈಮೇಲೆ ಮಾತ್ರ ಹಾಕಬೇಕು ಅಂತಾ ಯಾರು ರೂಲ್ಸ್ ಕೊಟ್ಟಿದ್ದಾರೆ. ವೇಲನ್ನ ನಾವು ತಲೆ ಮೇಲು ಹಾಕಿಕೊಳ್ಳುತ್ತೇವೆ, ಎದೆ ಮೇಲೂ ಹಾಕಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

ಬೆಳಗ್ಗಿನಿಂದಲೂ ಹಿಜಬ್ ಕುರಿತು ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಮಧ್ಯೆ ಜಟಾಪಟಿ ನಡೆಯಿತು. ನಮ್ಮ ಮಕ್ಕಳು ವೇಲ್ ಹಾಕಿದ್ರೆ ಅವರಿಗೇನು ಸಮಸ್ಯೆ?. ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕುವುದು ಸರಿಯಲ್ಲ ಎಂದು ಶಾಲೆ ಬಳಿ ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲಾ ನೋಡಿದ ವಿದ್ಯಾರ್ಥಿಯೊಬ್ಬ ಬ್ಯಾಗ್ ನಿಂದ ಕೇಸರಿ ಶಾಲನ್ನು ತೆಗೆದು ಕೈನಲ್ಲಿ ಹಿಡಿದುಕೊಂಡ ಘಟನೆಯೂ ಕೂಡ ನಡೆಯಿತು. ನಂತರ ಪೊಲೀಸರು ಶಲ್ಯವನ್ನು ಬ್ಯಾಗಿನಲ್ಲಿ ಇರಿಸಿದ್ದಾರೆ.
ಇನ್ನೂ ಸ್ಥಳಕ್ಕಾಗಮಿಸಿದ ಡಿಡಿಪಿಐ ಮಲ್ಲೇಶಪ್ಪ ಅವರು, ಗೇಟಿನ ಹೊರಗಡೆ ಇದ್ದ ಮಕ್ಕಳನ್ನು ಒಳಗಡೆ ಕರೆದುಕೊಂಡು ಹೋಗಿದ್ದರು. ಶಾಲೆಯ ಒಳಗೆ ಹೋಗಲು ಹಿಜಬ್ ತೆಗೆಯುವಂತೆ ಮಕ್ಕಳಲ್ಲಿ ಮನವಿ ಮಾಡಿದರು. ಆದರೆ ಡಿಡಿಪಿಐ ಮನವಿಯನ್ನು ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ಡಿಡಿಪಿಐ ಮಲ್ಲೇಶಪ್ಪ ಶಾಲೆಗೆ ರಜೆ ಘೋಷಿಸಿದ್ದಾರೆ.










