ಕೆಳವರ್ಗದ ಮನೆ ಮೇಲೆ ದಾಳಿ ನಡೆಸಿರುವ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ…

97
firstsuddi

ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಯರೇಹಳ್ಳಿ ತಾಂಡ್ಯಾದ ನಾಗಲಾಪುರದಲ್ಲಿ ಕೆಳವರ್ಗದ ಮನೆ ಮೇಲೆ ದಾಳಿ ನಡೆಸಿ ನಷ್ಟ ಉಂಟು ಮಾಡಿರುವ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಸಂತ್ರಸ್ಥ ಕುಟುಂಬದೊಂದಿಗೆ ನಿನ್ನೆ ಭೇಟಿ ಮಾಡಿ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು ಘಟನೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಾಗಲಾಪುರದ ಸರ್ವೆ ನಂಬರ್ 31ರಲ್ಲಿ ಮನೆ ನಿರ್ಮಿಸಿಕೊಂಡು 13 ವರ್ಷಗಳಿಂದ ವಾಸಿಸುತ್ತಿರುವ ರುದ್ರಮ್ಮ ಅವರ ಮನೆ ಮೇಲೆ ಈಚೆಗೆ ಗ್ರಾಮಸ್ಥರು ದಾಳಿ ನಡೆಸಿ ಸಿಮೆಂಟ್ ಶೀಟ್‍ಗಳನ್ನು ಹೆಂಚು ಮತ್ತು ಕಿಟಕಿಗಳನ್ನು ಒಡೆದು ಹಾಕಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವಂತೆ ಆಗ್ರಹಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಲ್.ಎಸ್. ಶ್ರೀಕಾಂತ್, ಸಂಘಟನಾ ಸಂಚಾಲಕ ಡಿ. ರಾಮು, ಶೃಂಗೇರಿ ಕ್ಷೇತ್ರ ಪ್ರಧಾನ ಸಂಚಾಲಕ ಎಸ್. ಹನುಮಂತ, ಜಿಲ್ಲಾ ಕಾರ್ಯದರ್ಶಿ ಪಿ.ಎ. ಜಾರ್ಜ್, ರುದ್ರಮ್ಮ, ರಾಮಾ ಭೋವಿ, ರಂಜಿತ್ ಹಾಜರಿದ್ದರು.