ವಿಜಯನಗರ: ಪಾಗಲ್ ಪ್ರೇಮಿಯೊಬ್ಬ ಗೃಹಿಣಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಯಲ್ಲಿ ನಡೆದಿದೆ.
ಪ್ರತಿಭಾ ನಾಗರಾಜ್ (25) ಕೊಲೆಯಾದ ಮಹಿಳೆ ಹಾಗೂ ಮೂಕಪ್ಪನವರ ಹನುಮಂತ (27) ಕೊಲೆ ಮಾಡಿದ ಆರೋಪಿ.
ಆರೋಪಿ ಮೂಕಪ್ಪನವರ ಹನುಮಂತ ಪ್ರತಿಭಾಳನ್ನ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಗ್ರಾಮದಲ್ಲಿ ಸುತ್ತುತ್ತಿದ್ದ. ಆದರೆ ಪ್ರತಿಭಾಳನ್ನ ರಾಣೆಬೆನ್ನೂರಿನ ನಾಗರಾಜ್ ಎಂಬುವವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆಕೆಗೆ ಓರ್ವ ಗಂಡು ಮಗು ಸಹ ಇದೆ.
ಜಾತ್ರೆಗೆಂದು ಪ್ರತಿಭಾ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಈ ವೇಳೆ ಹನುಮಂತು ಆಕೆಯನ್ನು ನೋಡಿದ್ದಾನೆ. ತಾನು ಪ್ರೀತಿಸಿದವಳು ಮತ್ತೊಬ್ಬನೊಂದಿಗೆ ಚೆನ್ನಾಗಿರುವುದನ್ನು ಸಹಿಸಲಾಗದೇ ಪ್ರತಿಭಾಳ ಬಹುತೇಕ ಭಾಗಗಳಿಗೆ ಮನಬಂದಂತೆ ಚಾಕು ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಪ್ರತಿಭಾಳನ್ನು ಹರಿಹರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ರಕ್ತ ಸ್ರಾವದಿಂದ ಮಾರ್ಗಮಧ್ಯಯೇ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹರಪನಹಳ್ಳಿ ತಾಲೂಕಿನ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಹನುಮಂತನನ್ನು ಪೊಲೀಸರು ಬಂಧಿಸಿದ್ದಾರೆ.










