ಚಿಕ್ಕಮಗಳೂರು ದತ್ತಜಯಂತಿ 2024: 4 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ.

51

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಭಾಗದ ದತ್ತಪೀಠದಲ್ಲಿ ದತ್ತಜಯಂತಿ ಅಂಗವಾಗಿ ಡಿಸೆಂಬರ್ 11 ರಿಂದ 14ರ ವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಡಿಸೆಂಬರ್ 11 ರ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 15ರ ಬೆಳಗ್ಗೆ 10 ಗಂಟೆವರೆಗೂ ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಈ ನಾಲ್ಕು ದಿನಗಳ ಕಾಲ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಭಂದ ಹೇರಿದೆ. ದತ್ತಪೀಠದಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ 9 ದಿನಗಳ ಕಾಲ ದತ್ತಜಯಂತಿ ನಡೆಯಲಿದೆ. ಅದರಲ್ಲಿ 12-13-14 ಈ ಮೂರು ದಿನವೂ ದತ್ತಪೀಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಹಾಗಾಗಿ, ಮುಂಜಾಗೃತ ಕ್ರಮವಾಗಿ ಪ್ರವಾಸಿಗರ ವಾಹನ ಹಾಗೂ ದತ್ತ ಮಾಲಾಧಾರಿಗಳ ವಾಹನಗಳಿಂದ ಟ್ರಾಫಿಕ್ ಜಾಮ್ ಆಗಿ ಸಮಸ್ಯೆ ಆಗಬಾರದು. ಅಲ್ಲದೇ ಭದ್ರತೆಯ ದೃಷ್ಠಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಡಿಸೆಂಬರ್ 12ರಂದು ಸಾವಿರಾರು ಮಹಿಳೆಯರು ನಗರದಲ್ಲಿ ಅನುಸೂಯ ಜಯಂತಿ, ದತ್ತಪೀಠದಲ್ಲಿ ಹೋಮ-ಹವನ ಮಾಡಲಿದ್ದಾರೆ. 13 ರಂದು ಚಿಕ್ಕಮಗಳೂರು ನಗರದಲ್ಲಿ ಧತ್ತ ಮಾಲಾಧಾರಿಗಳು ಹಾಗೂ ಸಾರ್ವಜನಿಕರು ಸೇರಿ 20,000ಕ್ಕೂ ಅಧಿಕ ಭಕ್ತರು ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ. 14 ರಂದು ರಾಜ್ಯದ ವಿವಿಧ ಭಾಗಗಳಿಂದ ಬರುವಂತಹ 25,000ಕ್ಕೂ ಅಧಿಕ ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಕಾರ್ಯಕ್ರಮ ಮುಗಿಯುವ ವರೆಗೂ 5,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ ಹಾಗೂ ದತ್ತಪೀಠ ಸೇರಿ ಜಿಲ್ಲಾದ್ಯಂತ ಬಿಗಿ-ಬಂದೂಬಸ್ತ್ ಏರ್ಪಡಿಸಲಾಗಿದೆ.