ಜಯನಗರ ಕ್ಷೇತ್ರಕ್ಕೆ ಕೊನೆಗೂ ಅನುದಾನ ಬಿಡುಗಡೆ ಮಾಡಿದ ಡಿಸಿಎಂ.

28

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 27 ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿ, ಜಯನಗರಕ್ಕೆ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಿರಲಿಲ್ಲ. ಈ ಹಿನ್ನೆಲೆ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದು ಅನುದಾನಕ್ಕೆ ಆಗ್ರಹಿಸಿದ್ದರು. ಜೊತೆಗೆ ಅನುದಾನದ ವಿಚಾರವಾಗಿ ಜಯನಗರದ ಸೆಲೆಬ್ರಿಟಿಗಳು, ಮತದಾರರು, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೋರಾಟ ಮಾಡಿದ್ದರು. ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾದ ಮೇಲೆ ಬೆಂಗಳೂರು ಅಧೋಗತಿಗೆ ಹೋಗಿದೆ ಎಂಬ ಶಾಸಕ ಸಿ.ಕೆ ರಾಮಮೂರ್ತಿ ಹೇಳಿಕೆಗೆ ಅನುದಾನ ತಡೆ ಹಿಡಿದಿದ್ದೇನೆ. ರಾಮಮೂರ್ತಿ ತಮ್ಮ ಹೇಳಿಕೆಗೆ ನನಗೆ ಸಮಜಾಯಿಷಿ ನೀಡಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಕೊನೆಗೂ ಜಯನಗರ ಕ್ಷೇತ್ರಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, 10 ಕೋಟಿ ಅನುದಾನ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಕಳೆದ ಅಕ್ಟೋಬರ್ ಕೊನೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ.ನಂತೆ 270 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ ಈ ಪಟ್ಟಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರತಿನಿಧಿಸುವ ಜಯನಗರ ಕ್ಷೇತ್ರವನ್ನು ಹೊರಗಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ನಾಗಸಂದ್ರದಿಂದ ಮಾದಾವರ ಮೆಟ್ರೋ ಸೇವೆ ಲೋಕಾರ್ಪಣೆಗೂ ಮುನ್ನ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರು ಜೊತೆಯಾಗಿ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರು ಜಯನಗರದ ಅನುದಾನ ವಿಚಾರವನ್ನು ಪ್ರಸ್ತಾಪಿಸಿ ಮನವಿ ಮಾಡಿದ್ದರು. ಈ ವೇಳೆ, ನಾನು ಬಂದ ಮೇಲೆ ಬೆಂಗಳೂರು ಅಧೋಗತಿ ಆಗೋಯ್ತು ಎಂದು ಅವನು ಹೇಳಿಕೆಯನ್ನು ನೀಡಿದ್ದ. ನನ್ನ ಜೊತೆ ಮಾತನಾಡಬೇಕಾದರೆ ತಗ್ಗಿಬಗ್ಗಿ ಇರಬೇಕು. ಬೇರೆಯವರ ಜೊತೆಗೆ ಇದ್ದಂತೆ ಇದ್ದರೆ ಆಗುವುದಿಲ್ಲ ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.