ರಾಯಚೂರು : ಜಾನುವಾರುಗಳಿಗೆ ನೀರು ತರಲು ಹೋಗಿ ಕಾಲು ಜಾರಿ ಬಿದ್ದು ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲ್ಲೂಕಿನ ರೌಡಕುಂದ ಗ್ರಾಮದಲ್ಲಿ ನಡೆದಿದೆ. ರವಿಕುಮಾರ್(7), ಕಾರ್ತಿಕ್(8) ಹಾಗೂ ನಾಗರಾಜ್(10) ಮೃತ ಬಾಲಕರು ಎಂದು ಗುರುತಿಸಲಾಗಿದ್ದು, ಒಂದೇ ಕುಟುಂಬದ ಮೂವರು ಬಾಲಕರು ಇಂದು ಬೆಳಿಗ್ಗೆ 7ಗಂಟೆ ಸುಮಾರಿಗೆ ತಮ್ಮ ಜಾನುವಾರುಗಳಿಗೆ ನೀರು ತರಲು ಹೋಗಿದ್ದು, ಈ ವೇಳೆ ಓರ್ವ ಬಾಲಕ ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಇಬ್ಬರು ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಅವರು ಕೂಡಾ ನೀರಲ್ಲಿ ಕಾಲು ಜಾರಿ ಬಿದ್ದು ಮೂವರು ನೀರು ಪಾಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೆರೆಯ ಬಳಿ ಸ್ಥಳೀಯರು ಹೋಗಿ ನೋಡಿದಾಗ ಬಾಲಕರು ಮೃತಪಟ್ಟಿರುವುದು ತಿಳಿದು ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಂಧನೂರು ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










