ಮುಂಬೈ : ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ ನೀಡಿದ್ದಾರೆ.
ಇಂದು ಚೇತನ್ ಶರ್ಮಾ ತಮ್ಮ ರಾಜೀನಾಮೆ ಪತ್ರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಸಲ್ಲಿಸಿದ್ದು, ಜಯ್ ಶಾ ರಾಜೀನಾಮೆ ಅಂಗೀಕರಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಟೀಂ ಇಂಡಿಯಾದ ಬಗ್ಗೆ ಕೆಲವು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದರು. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಅವರ ನಡುವಿನ ಆಂತರಿಕ ಚರ್ಚೆಗಳ ಬಗ್ಗೆಯೂ ಬಹಿರಂಗಪಡಿಸಿದ್ದರು.
ಕಳೆದ ವರ್ಷದ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿದ ಬಳಿಕ ಇಡೀ ಆಯ್ಕೆ ಸಮಿತಿಯನ್ನೇ ಬಿಸಿಸಿಐ ವಜಾಗೊಳಿಸಲಾಗಿತ್ತು. ಬಳಿಕ ಕಳೆದ ತಿಂಗಳಷ್ಟೇ ಮುಖ್ಯ ಆಯ್ಕೆಗಾರರಾಗಿ ಚೇತನ್ ಅವರನ್ನು ಮರು ನೇಮಕ ಮಾಡಲಾಗಿತ್ತು.
ಕಳೆದ ಮೂರು ದಿನಗಳಿಂದ ಹಿಂದೆ ನಡೆಸಲಾದ ಕುಟುಕು ಕಾರ್ಯಾಚರಣೆಯ ನಂತರ, ಚೇತನ್ ಶರ್ಮಾರನ್ನು ವಜಾಗೊಳಿಸಲು ತೀವ್ರ ಒತ್ತಡ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಚೇತನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.