ತುಮಕೂರಿನಲ್ಲಿ ದಸರಾ ಸಂಭ್ರಮ: ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ.

25

ತುಮಕೂರು: ತುಮಕೂರಿನಲ್ಲಿ ಇಂದು ಅದ್ಧೂರಿ ದಸರಾ ಕಾರ್ಯಕ್ರಮ ಹಿನ್ನೆಲೆ ತುಮಕೂರು ನಗರದಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗೂ ನಗರದಲ್ಲಿ ಸಂಪೂರ್ಣ ವಾಹನಗಳ ಓಡಾಟಕ್ಕೆ ನಿಬರ್ಂಧ ಹೇರಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆವರೆಗೂ ನಗರದಲ್ಲಿ ಯಾವ್ದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ. ತುಮಕೂರಿನ BGS ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ಜಂಬೂಸವಾರಿ ಆರಂಭವಾಗಲಿದೆ. ಬಿಜಿಎಸ್ ವೃತ್ತದಿಂದ ಅಶೋಕ ರಸ್ತೆ, ಚರ್ಚ್ ವೃತ್ತ, ಡಿಸಿ ಕಚೇರಿ, ಅಮಾನಿಕರೆ, ಕೋತಿತೋಪು ರಸ್ತೆ, ಶಿವಕುಮಾರ್ ಸ್ವಾಮಿ ವೃತ್ತದ ಮೂಲಕ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನಕ್ಕೆ ಜಂಬೂಸವಾರಿ ಬರಲಿದೆ. ತಮಕೂರಿನ ಲಕ್ಷ್ಮೀ ಆನೆ ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಲಕ್ಷ್ಮೀ ಆನೆ ಸೇರಿ 2 ಆನೆಗಳು ಜೊತೆಗೆ ನೂರಕ್ಕೂ ಹೆಚ್ಚು ದೇವಾಲಯಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಜಂಬೂಸವಾರಿ ಜೊತೆ ಅಶ್ವಾರೋಹಿ ದಳ, ವಿಂಟೇಜ್ ಕಾರ್ ಹಾಗೂ ನೂರಾರು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಹೆಚ್‍ಎಎಲ್ ವತಿಯಿಂದ ಹೆಲಿಕಾಪ್ಟರ್ ಶೋ, ರಾತ್ರಿ 7 ಗಂಟೆಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಡ್ರೋಣ್ ಶೋ, ರಾತ್ರಿ 8 ಗಂಟೆಗೆ ಗ್ಯಾತ ಗಾಯಕ ವಿಜಯಪ್ರಕಾಶ್ ತಂಡದಿಂದ ಮನರಂಜನಾ ಕಾರ್ಯಕ್ರಮ ಇರಲಿದೆ.
ತುಮಕೂರು ನಗರದಲ್ಲಿ ಸಂಚರಿಸುವ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುವ ವಾಹನಗಳು ಕ್ಯಾತಸಂದ್ರ ಟೋಲ್‍ನಿಂದ ರಿಂಗ್‍ರೋಡ್ ಮೂಲಕ ಕುಣಿಗಲ್ ಜಂಕ್ಷನ್, ಗುಬ್ಬಿ ಗೇಟ್ ಮೂಲಕ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಗುಬ್ಬಿ ಗೇಟ್, ಕುಣಿಗಲ್ ಜಂಕ್ಷನ್ ಮಾರ್ಗವಾಗಿ ಕ್ಯಾತಸಂದ್ರ ಟೋಲ್ ಕಡೆಯಿಂದ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು-ಶಿರಾ ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಕುಣಿಗಲ್ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು ಲಕ್ಕಪ್ಪ ಸರ್ಕಲ್‍ವರೆಗೆ ಮಾತ್ರ ಬರಲು ವಾಹನಗಳಿಗೆ ಅವಕಾಶ ನೀಡಲಾಗಿದೆ. ಆ್ಯಂಬುಲೆನ್ಸ್ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ತುಮಕೂರಿನಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಿಗಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ತುಮಕೂರು ಎಸ್‍ಪಿ ಅಶೋಕ್ ವೆಂಕಟ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 200 ಹೋಂಗಾರ್ಡ್ಸ್, 550 ಕಾನ್ಸ್ ಟೇಬಲ್, 50 ಮಹಿಳಾ ಕಾನ್ಸ್‍ಟೇಬಲ್, 53 ಪೊಲೀಸ್ ಹೆಡ್ ಕಾನ್ಸ್ ಟೇಬಲ್, 53 ಎಎಸ್ಐ, 35 ಪಿಎಸ್ಐ, 20 ಸಿಪಿಐ, 4 ಡಿವೈಎಸ್‍ಪಿ, ಇಬ್ಬರು ಎಎಸ್‍ಪಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಪೊಲೀಸರಿಗೆ ಸಹಕರಿಸುವಂತೆ ಎಸ್‍ಪಿ ಅಶೋಕ್ ಮನವಿ ಮಾಡಿದ್ದಾರೆ.