ಕೊಟ್ಟಿಗೆಹಾರ : ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ನಿನ್ನೆ ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ ಮನೆ, ಗದ್ದೆ, ತೋಟಗಳಲ್ಲಿ ಕೇದಿಕೆ ಸೇರಿದಂತೆ ವಿವಿಧ ಸೊಪ್ಪುಗಳನ್ನು ಇಟ್ಟು ಮನೆಗಳಲ್ಲಿ ಬಲೀಂದ್ರರಾಯನಿಗೆ ಎಡೆ ಇಟ್ಟು ಪೂಜೆ ಸಲ್ಲಿಸಲಾಯಿತು.
ಬಣಕಲ್, ಕೊಟ್ಟಿಗೆಹಾರ, ಅತ್ತಿಗೆರೆ, ತರುವೆ, ಬಾಳೂರು, ಬಂಕೇನಹಳ್ಳಿ ಮುಂತಾದ ಕಡೆಗಳಲ್ಲಿ ಗ್ರಾಮಸ್ಥರು ಸೂರ್ಯೋದಯಕ್ಕೂ ಮೊದಲು ಗದ್ದೆ ಹಾಗೂ ಹಳ್ಳದ ಬದಿಗಳಲ್ಲಿ ಬೆಳೆದ ಕೇದಿಗೆ, ಲಕ್ಕಿಸೊಪ್ಪು ಮುಂತಾದ 20 ತರದ ಸೊಪ್ಪುಗಳನ್ನು ತಂದು ಮನೆಯಲ್ಲಿ ಪೂಜೆ ಸಲ್ಲಿಸಿದರು. ನಂತರ ಮನೆ, ಗದ್ದೆ, ತೋಟಗಳಲ್ಲಿ ‘ಭೂತಸೊಪ್ಪು’ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು.
ಸಿಹಿ ಅಡುಗೆ, ಸಿಹಿಗೆಣಸಿನ ಪಲ್ಯ ಮುಂತಾದ ಖಾದ್ಯಗಳನ್ನು ಮಾಡಿ ಬಲೀಂದ್ರರಾಯನಿಗೆ ಎಡೆ ಇಟ್ಟು ಪೂಜೆ ಸಲ್ಲಿಸಲಾಯಿತು.










