ಉಡುಪಿ: ದೇಶ ವಿರೋಧಿ ಘೋಷಣೆ ಕೂಗುವವರು, ನಗರ ನಕ್ಸಲರು ರೈತರ ಹೆಸರಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಅವರು ಉಡುಪಿಯಲ್ಲಿ ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ನಿರ್ವಹಿಸಿದ ರೀತಿಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕೃಷಿ ಮಸೂದೆ ಜಾರಿಗೆ ತರುವ ಮುಂಚಿತವಾಗಿ ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚಿಸಿ ಜಾರಿಗೊಳಿಸಲಾಗಿದೆ ಈ ಸಮಿತಿಯಲ್ಲಿ ಪಂಜಾಬ್ ನ ಈಗಿನ ಮುಖ್ಯಮಂತ್ರಿ, ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಕೂಡ ಇದ್ದರು ಆದರೆ ಈಗ ಅವರುಗಳ ರಾಜ್ಯದ ರೈತರೇ ಪ್ರತಿಭಟನೆ ನಡೆಸುತ್ತಿರುವುದು ನೋಡಿದರೆ ಇದರ ಹಿಂದೆ ರಾಜಕೀಯ ಹುನ್ನಾರ ಇರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದರು.
ಎನ್ಯುನಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಉಮರ್ ಖಲೀದ ಪ್ರತಿಭಟನೆಯಲ್ಲಿದ್ದಾರೆ. ರಾಷ್ಟ್ರದ್ರೋಹ ಕೆಲಸದಲ್ಲಿ ತೊಡಗುವ ಇವರಿಗೂ ಮತ್ತು ಶ್ರಮವಹಿಸಿ ದುಡಿಯುವ ರೈತರೊಂದಿಗೆ ಹೋಲಿಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯಿದೆಯಿಂದ ರೈತರಿಗೆ ಯಾವುದೇ ಸಮಸ್ಯೆಯಿಲ್ಲ ಇದನ್ನು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಹೇಳುವ ಕೆಲಸ ಮಾಡಲಿದೆ ಎಂದರು.
ಕೋವಿಡ್ ಲಸಿಕೆ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ ಅವರು ಲಸಿಕೆ ಒಂದು ಪ್ರಯೋಗ ದೇಶದ ಜನತೆಗೆ ಉಪಯೋಗವಾಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ರಾಜಕೀಯ ಮಾಡುವವರ ಮಾಡಿಕೊಳ್ಳಲಿ ಎಂದರು.










