ನಮ್ಮ ಸಮಾಜದ ಹೆಸರೇಳಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ : ಸಿಎಂ ವಿರುದ್ಧ ಯತ್ನಾಳ್ ವಾಗ್ದಾಳಿ…

101
Firstsuddi

ಬೆಂಗಳೂರು : ನಮ್ಮ ಸಮಾಜದ ಹೆಸರೇಳಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ನಿನ್ನೆಯೇ ಸರ್ಕಾರ ಉತ್ತರ ಕೊಡುತ್ತದೆ ಎಂದು ಹೇಳಿದ್ದರೂ ಉತ್ತರ ಕೊಡಬೇಕಾದ ಸಿಎಂ ನಾಪತ್ತೆಯಾಗಿದ್ದಾರೆ. ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಯತ್ನಾಳ್ ಅವರು ವಾಗ್ದಾಳಿ ನಡೆಸಿದರು.

ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್ ಅವರು ಅವಕಾಶ ಕೇಳಿದರು. ಆದ್ರೆ ಸ್ಪೀಕರ್ ಕೊನೆಯಲ್ಲಿ ಸಮಯ ನೀಡುತ್ತೇನೆ ಎಂದಾಗ ಇದರಿಂದ ಕೋಪಗೊಂಡ ಯತ್ನಾಲ್ ಅವರು ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದ ಪ್ರಸಂಗವು ನಡೆಯಿತು.

ಶೈಕ್ಷಣಿಕ ಸಾಮಾಜಿಕವಾಗಿ ಹಲವು ಸಮುದಾಯಗಳಿಗೆ ಮೀಸಲಾತಿ ಸಿಕ್ಕಿಲ್ಲ. ರಾಜ್ಯದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಬೇಕಾಗಿದೆ. ಸಣ್ಣ ಸಣ್ಣ ಸಮುದಾಯಗಳಿಗೆ ಅವರನ್ನು ಪ್ರತಿನಿಧಿಸುವವರೇ ಇಲ್ಲದೆ ಅನ್ಯಾಯ ಆಗ್ತಿದೆ. ಪಂಚಮಸಾಲಿ ಸಮುದಾಯ ಎಲ್ಲಿಯೂ ತಮ್ಮ ಜಾತಿ ಹೆಸರು ಬರೆದಿಲ್ಲ. ಮೀಸಲಾತಿ ಜಾರಿ ಮಾಡುವುದಿಲ್ಲ ಎಂದಾದರೆ ಹಾಗೆಯೇ ತಿಳಿಸಿ. ಮುಖ್ಯಮಂತ್ರಿಗಳು ಇದಕ್ಕೆ ಸ್ಪಷ್ಟ ಉತ್ತರ ಕೊಡಬೇಕು. ಇಲ್ಲವಾದಲ್ಲಿ ನಾಳೆಯಿಂದ ಶಿವರಾತ್ರಿ ಆಮರಾಣಾಂತ ಉಪವಾಸ ಶುರು ಮಾಡ್ತಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಿಎಂ ಯಡಿಯೂರಪ್ಪನವರು ನಿನ್ನೆ ಮಾತನಾಡ್ತೀನಿ ಅಂತ ಹೊರಗಡೆ ಹೇಳಿದ್ದರು. ಆದ್ರೆ ಉತ್ತರ ಕೊಡಬೇಕಾದ ಸಿಎಂ ನಾಪತ್ತೆಯಾಗಿದ್ದಾರೆ. ಸಿಎಂ ಉತ್ತರ ಕೊಡ್ತಿಲ್ಲ ಅಂದರೆ ನಾಪತ್ತೆ ಆಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರೇಣುಕಾಚಾರ್ಯ ಅವರು ಸಿಎಂ ಯಡಿಯೂರಪ್ಪ ನಾಪತ್ತೆಯಾಗಿಲ್ಲ. ಪಂಚಮಸಾಲಿ ಸಮುದಾಯಕ್ಕೆ ಅಪಾರ ಗೌರವವಿದೆ ಎಂದು ಹೇಳಿದಾಗ ಯತ್ನಾಳ್ ಹಾಗೂ ರೇಣುಕಾಚಾರ್ಯ ನಡುವೆ ಕೆಲ ಕಾಲ ಜಟಾಪಟಿ ನಡೆಯಿತು.