ನೋಡುಗರ ಗಮನ ಸೆಳೆದ ‘ವಾಲಿವಧೆ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ…

70
firstsuddi

ಚಿಕ್ಕಮಗಳೂರು: ಹವ್ಯಕ ಬಳಗದಿಂದ ನಗರದ ಗಾಯತ್ರಿ ದೇವಿ ಕಲ್ಯಾಣ ಮಂಟಪದಲ್ಲಿ ನಿನ್ನೆ ನಡೆದ ಕವಿ ಪಾರ್ತಿಸುಬ್ಬ ಅವರ ‘ವಾಲಿವಧೆ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.

ರಾಮಾಯಣದ ಅಂತರಾರ್ಥ ಆ ಕಾಲದ ಧರ್ಮ, ನೀತಿ, ನ್ಯಾಯ, ಉನ್ನತ ಮೌಲ್ಯಗಳು, ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಆದರ್ಶ, ಕರುಣೆ, ಪ್ರೀತಿ, ವಾತ್ಸಲ್ಯ, ನಡೆ-ನುಡಿ ನಿರ್ಣಾಯಗಳನ್ನು ಪಾತ್ರಧಾರಿಗಳು ಸಭಿಕರೆದುರು ಎಳೆ ಎಳೆಯಾಗಿ ಬಿಡಿಸಿಟ್ಟರು.
ಭಾಗವತರ ಕಂಚಿನ ಕಂಠದ ಗಾಯನ, ಕಲಾವಿದರ ಚುರುಕು ಸಂಭಾಷಣೆ, ಪ್ರಾಸಬದ್ಧ ಮಾತು, ನವಿರು ಹಾಸ್ಯ, ಮಾತಿನ ಚಾತುರ್ಯ, ಸಭಿಕರನ್ನು ನಾಲ್ಕು ಗಂಟೆಗಳ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಭಾಗವತಿಕೆಯಲ್ಲಿ ಕೊಳಗಿ ಕೇಶವ ಹೆಗಡೆ, ಚಂಡೆಯಲ್ಲಿ ಕೆಸರ ಕೊಪ್ಪ ವಿಘ್ನೇಶ್ವರ, ಮದ್ದಲೆಯಲ್ಲಿ ಯಲ್ಲಾಪುರದ ಶಂಕರ ಭಾಗವತ ತಮ್ಮ ಪ್ರತಿಭೆಯಿಂದ ಸಭಿಕರು ತಲೆದೂಗುವಂತೆ ಮಾಡಿದರು.

ಶ್ರೀ ರಾಮನ ಪಾತ್ರದಲ್ಲಿ ಮಧೂರು ವಾಸುದೇವರಂಗಾ ಭಟ್, ವಾಲಿಯಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಸುಗ್ರೀವನಾಗಿ ವೃತ್ತ ನಿರೀಕ್ಷಕ ವಿನೋದ್ ಭಟ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದವರಂತೆ ಸಂಭಾಶಿಸುವ ಮೂಲಕ ನೋಡುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.

ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಡಿ ಹವ್ಯಕ ಸಮುದಾಯದವರು ಕಲ್ಯಾಣ ಮಂಟಪದಲ್ಲಿ ಕಲೆತು ಬೆಳಗ್ಗೆನಿಂದ ರಾತ್ರಿವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.

ಬೆಳಗ್ಗೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಹಿರಿಯ ಸಂಸ್ಕೃತ ಉಪನ್ಯಾಸಕ ವಿದ್ವಾನ್ ದತ್ತಮೂರ್ತಿ ಭಟ್ ಅವರಿಂದ ಪ್ರವಚನ ಜರುಗಿತು.

ಸಮುದಾಯದ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಮಧ್ಯಾಹ್ನ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆ ಸುರೇಖಾ ಗೋಪಾಲ ಹೆಗಡೆ ಅವರಿಂದ ಸಂಗೀತ ರಸದಾರ ಗೀತಗಾಯನ ನಡೆಯಿತು.

ಹವ್ಯಕ ಬಳಗದ ಅಧ್ಯಕ್ಷ ರಾಮ ಜಿ. ಹಾಸ್ಯಗಾರ ಉಪಾಧ್ಯಕ್ಷರಾದ ಪರುಷರಾಮ ಜೋಶಿ, ಗಜಾನನ ವಿ. ಹೆಗಡೆ, ಸಂಚಾಲಕ ಕೆ.ಎನ್.ಮಂಜುನಾಥ ಭಟ್, ಕಾರ್ಯದರ್ಶಿ ಶಂಕರನಾರಾಯಣ ಭಟ್, ರಾಜಾರಾಮ್ ಕೋಟೆ ಉಪಸ್ಥಿತರಿದ್ದರು.