ಭಾರತ ಸೇವಾದಳವನ್ನು ಉಳಿಸಿ ಬೆಳೆಸಲು ಶಿಕ್ಷಕರು ಮುಂದಾಗಬೇಕು: ಐ.ಬಿ. ಶಂಕರ್.

58
firstsuddi

ಚಿಕ್ಕಮಗಳೂರು: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿರುವ ಭಾರತ ಸೇವಾದಳವನ್ನು ಉಳಿಸಿ ಬೆಳೆಸಲು ಶಿಕ್ಷಕರು ಮುಂದಾಗಬೇಕು ಎಂದು ಮಾಜಿ ಶಾಸಕ ಮನವಿ ಮಾಡಿದರು.

ಭಾರತ ಸೇವಾದಳದ ಜಿಲ್ಲಾ ಮತ್ತು ತಾಲೂಕು ಘಟಕ ನಗರದ ಶಿಕ್ಷಕರ ಭವನದಲ್ಲಿ ಇಂದು ಸೇವಾದಳದ ತರಬೇತಿ ಪಡೆದ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲೇ ಅತ್ಯಂತ ಅತ್ಯುತ್ತಮವಾದ ಸಂಸ್ಥೆ ಇದ್ದರೆ, ಅದು ಭಾರತ ಸೇವಾದಳ ಮಾತ್ರ. ಅದು ಸ್ವಾರ್ಥಕ್ಕಾಗಿ ಹುಟ್ಟಿದ್ದಲ್ಲ, ಸ್ವಾತಂತ್ರ್ಯಕ್ಕಾಗಿ ದೇಶಭಕ್ತರನ್ನು, ಹೋರಾಟಗಾರರನ್ನು, ರಾಷ್ಟ್ರಪ್ರೇಮಿಗಳನ್ನು ತಯಾರು ಮಾಡಲು ಹುಟ್ಟಿದ ಸಂಸ್ಥೆ ಎಂದರು.

ಲಕ್ಷಾಂತರ ದೇಶಭಕ್ತರು ಮತ್ತು ಸ್ವಾತಂತ್ರ ಹೋರಾಟಗಾರರನ್ನು ದೇಶಕ್ಕೆ ಕೊಟ್ಟ ಭಾರತ ಸೇವಾದಳ ಇತ್ತೀಚಿನ ವರ್ಷಗಳಲ್ಲಿ ಸೊರಗುತ್ತಿದ್ದು, ಅದನ್ನು ಜತನದಿಂದ ಕಾಪಾಡಿ ಉಳಿಸಿ, ಬೆಳೆಸುವ ಹೊಣೆ ಸೇವಾದಳ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಎಸ್.ವಿ. ಬಸವರಾಜ್ ಮಾತನಾಡಿ, ಸೇವಾದಳದ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ, ಶಿಸ್ತು ಮತ್ತು ಭಾವೈಕ್ಯತೆಯನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾದಳದ ತಾಲೂಕು ಸಂಘಟಕ ಎಸ್. ಈ. ಲೋಕೇಶ್ವರಾಚಾರ್, ಭಾರತ ಸೇವಾದಳದ ಇಡೀ ವರ್ಷದ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಯಾರಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ. ಹೆಚ್. ನರೇಂದ್ರ ಪೈ, ಸೇವಾದಳ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಸೇವಾದಳದ ಕಾರ್ಯಕ್ರಮಗಳನ್ನು ವರ್ಷವಿಡಿ ನಡೆಸಬೇಕು ಎಂದು ಮನವಿ ಮಾಡಿದರು.

ಸೇವೆಯಿಂದ ನಿವೃತ್ತರಾದ ಮಾಚಗೊಂಡನಹಳ್ಳಿ ಶಾಲೆಯ ಶಿಕ್ಷಕ ಗಿರೀಶ್, ಮರ್ಲೆ ಶಾಲೆಯ ಶಿಕ್ಷಕಿ ಸುಭದ್ರಮ್ಮ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಜಗದೀಶಾಚಾರ್, ಜಿಲ್ಲಾ ಸಂಘಟಕ ಚಂದ್ರಕಾಂತ, ತಾಲೂಕು ಅಧ್ಯಕ್ಷ ಜಿ. ಶಂಕರ್, ಕಾರ್ಯದರ್ಶಿ ಮಹೇಶಪ್ಪ, ಪದಾಧಿಕಾರಿಗಳಾದ ಕಾಳಯ್ಯ, ಬಸವರಾಜ್, ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ, ಶೇಖರ್ ಉಪಸ್ಥಿತರಿದ್ದರು.