ಮೂವರು ಅರ್ಚಕರನ್ನು ಬರ್ಬರ ಹತ್ಯೆ ಮಾಡಿ ಹುಂಡಿಯ ಹಣ ದೋಚಿದ ಖದೀಮರು…

249
firstsuddi

ಮಂಡ್ಯ: ಮಂಡ್ಯದ ಶ್ರೀಅರ್ಕೇಶ್ವರ ದೇವಾಲಯದ ಪ್ರಾಂಗಣದಲ್ಲಿ ಮಲಗಿದ್ದ ಮೂವರು ಅರ್ಚಕರನ್ನು ಹತ್ಯೆ ಮಾಡಿ ಹುಂಡಿಯ ಹಣವನ್ನು ದೋಚಿರುವ ಪ್ರಕರಣ ಇಂದು ಬೆಳಗ್ಗಿನ ಜಾವ ನಡೆದಿದೆ.

ಮಂಡ್ಯದ ಗುತ್ತಲು ಎಂಬಲ್ಲಿನ ನಿವಾಸಿಗಳಾದ ಗಣೇಶ್ (35), ಪ್ರಕಾಶ್ (36) ಮತ್ತು ಆನಂದ್ (33) ಹತ್ಯೆಯಾದ ಅರ್ಚಕರು. ಅವರು ದೇವಾಲಯದ ಅರ್ಚಕರು ಮತ್ತು ಕಾವಲುಗಾರರಾಗಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದೇವರ ಪೂಜೆಯ ಉಸ್ತುವಾರಿ ಜೊತೆಗೆ ದೇವಾಲಯದ ಕಾವಲು ಕಾಯುತ್ತಿದ್ದರು. ಅರಕೇಶ್ವರ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.

ಈ ಮೂವರು ರಾತ್ರಿ ಗೋಪುರ ಮುಖ್ಯದ್ವಾರದ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಿಕೊಂಡು ಮಲಗಿದ್ದರು. ಉತ್ತರ ದಿಕ್ಕಿನ ಕಾಂಪೌಂಡ್ ಪಕ್ಕದಲ್ಲಿರುವ ಮರವನ್ನೇರಿ ದೇವಾಲಯದ ಒಳಗೆ ಪ್ರವೇಶಿಸಿರುವ ದರೋಡೆಕೋರರು ಮೂವರನ್ನು ಹತ್ಯೆ ಮಾಡಿ ನಂತರ ಹುಂಡಿ ಹೊಡೆದಿದ್ದಾರೆ. ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಹುಂಡಿಯನ್ನು ಕಲ್ಯಾಣಿ ಸಮೀಪದ ಸ್ನಾನದ ಮನೆ ಬಳಿ ಬಿಸಾಡಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಮಂಡ್ಯದ ಪೂರ್ವಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.