ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕಾದರೆ ಹಸಿರು ಪರಿಸರವನ್ನು ಉಳಿಸಬೇಕು: ಶ್ರೀ ಗುಣನಾಥ ಸ್ವಾಮೀಜಿ.

72
firstsuddi

ಚಿಕ್ಕಮಗಳೂರು: ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕಾದರೆ ನಾವು ಈಗಿನಿಂದಲೇ ಗಿಡ ಮರಗಳನ್ನು ನೆಟ್ಟು, ಹಸಿರು ಪರಿಸರವನ್ನು ಉಳಿಸಬೇಕು ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ನಗರದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಬಿ.ಜಿ.ಎಸ್. ಸಮೂಹ ಸಂಸ್ಥೆಗಳಿಂದ ಇಂದು ನಡೆದ ಜ್ಞಾನಾಂಕುರ, ವನಮಹೋತ್ಸವ, ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಕಾಲಕಾಲಕ್ಕೆ ಮಳೆ ಬೆಳೆಯಾಗಿ ಭೂಮಿ ಸಮೃದ್ಧವಾಗಬೇಕಾದರೆ, ನಮಗೆ ಉಸಿರಾಡಲು ಶುದ್ಧವಾದ ಗಾಳಿ, ಕುಡಿಯುವ ನೀರು ದೊರೆಯಬೇಕಾದರೆ ಗಿಡ ಮರಗಳು ಇರಬೇಕು ಎಂದು ತಿಳಿ ಹೇಳಿದರು.

ಮಾನವ ಸಂಕುಲಕ್ಕೆ, ಪ್ರಾಣಿ ಪಕ್ಷಿಗಳಿಗೆ ಜೀವಿಸಲು ಇರುವುದು ಇದೊಂದೇ ಭೂಮಿ. ಅದು ಇದ್ದರೆ ನಾವು. ಭೂಮಿ ಇಲ್ಲದಿದ್ದರೆ ನಾವೇ ಇಲ್ಲ. ಈಗಾಗಲೇ ಗಿಡ ಮರಗಳು ದಟ್ಟ ಕಾಡುಗಳು ಕಣ್ಮರೆಯಾಗಿರುವುದರಿಂದಾಗಿ ಕಾಲಕಾಲಕ್ಕೆ ಮಳೆ, ಬೆಳೆ ಇಲ್ಲದೆ ಉಸಿರಾಡಲು ಉತ್ತಮ ಗಾಳಿ, ಕುಡಿಯಲು ಶುದ್ಧವಾದ ನೀರಿಲ್ಲದೆ ದುಸ್ತಿತಿಯಲ್ಲಿದ್ದೇವೆ ಎಂದು ವಿಷಾಧಿಸಿದರು.

ಈಗಲಾದರೂ ನಾವು ಎಚ್ಚೆತ್ತು ಗಿಡ ಮರಗಳನ್ನು ನೆಟ್ಟು ಬೆಳೆಸದಿದ್ದರೆ. ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು, ನೆರಳು, ಮಳೆ, ಬೆಳೆ ಇಲ್ಲದೆ ಪರಿಸ್ಥಿತಿ ಭೀಕರವಾಗುತ್ತದೆ ಎಂದು ಎಚ್ಚರಿಸಿದರು.

ಅಕ್ಷರ ಸಂತ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಅಂದು ಐದು ಕೋಟಿ ಗಿಡಗಳನ್ನು ನೆಟ್ಟು ಪ್ರಕೃತಿಯನ್ನು ಉಳಿಸಿದ್ದರು. ಅಂದು ರಾಜ್ಯದಲ್ಲಿ ಐದು ಕೋಟಿ ಜನಸಂಖ್ಯೆ ಇತ್ತು ಇಂದು ಜನಸಂಖ್ಯೆ 8 ಕೋಟಿ ಆಗಿದೆ. ಹಾಗಾಗಿ ಇನ್ನೂ ಹೆಚ್ಚು ಗಿಡಮರಗಳನ್ನು ನೆಡಬೇಕು ಎಂದು ಸಲಹೆ ಮಾಡಿದರು.

ಮಂಗಳೂರಿನ ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕುರಿತು ಮಹಾಪ್ರಬಂಧ ಮಂಡಿಸಿ ಪುಸ್ತಕ ಬರೆಯುವ ಮೂಲಕ ಮಹದುಪಕರ ಮಾಡಿದ್ದಾರೆ ಎಂದು ಹೇಳಿದರು.

ಮಂಗಳೂರಿನ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ.ಧರ್ಮ ಪಾಲನಾಥ ಸ್ವಾಮೀಜಿ ಮಾತನಾಡಿ, ನೀವು ಗಿಡ ಮರಗಳನ್ನು ನೆಟ್ಟು ಬೆಳೆಸಿದರೆ ನಿಮ್ಮಿಂದಾಗಿ ಭೂಮಿ, ಪಕ್ಷಿ ಸಂಕುಲ, ಪ್ರಾಣಿ ಸಂಕುಲ ಉಳಿಯುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಮ್ಮ ಪ್ರತಿ ಹುಟ್ಟಿದ ದಿನದಂದು ಒಂದೊಂದು ಗಿಡ ನೆಡಿ ಎಂದು ಕಿವಿ ಮಾತು ಹೇಳಿದರು.

ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಎಐಟಿ ಪ್ರಾಂಶುಪಾಲ ಡಾ.ಸಿ.ಟಿ. ಜಯದೇವ, ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ, ನಾಯಕತ್ವ ಗುಣಗಳನ್ನು, ಭಾಷಾ ಪ್ರೌಡಿಮೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜೆ.ಜಿ. ಸುರೇಂದ್ರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಬಗ್ಗೆ ಮಹಾಪ್ರಬಂಧ ಮಂಡಿಸಿ ಮಂಗಳೂರು ವಿವಿ ಯಿಂದ ಪಿ.ಎಚ್.ಡಿ ಪಡೆದ ಹಿನ್ನೆಲೆಯಲ್ಲಿ ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಮುನ್ನ ಉಭಯಶ್ರೀಗಳು ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವುದರ ಜೊತೆಗೆ ಎಳೆಯ ಮಕ್ಕಳ ಕೈಯಲ್ಲಿ ಅಕ್ಷರ ಬರೆಸುವ ಮೂಲಕ ಅಕ್ಷರಭ್ಯಾಸ ಮಾಡಿಸಿದರು.

ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಾಲೆಯ ಮುಖ್ಯ ಶಿಕ್ಷಕ ಜಿ.ಆರ್.ಚಂದ್ರಶೇಖರ್, ಸಹಶಿಕ್ಷಕರಾದ ಡಿ. ಪಲ್ಲವಿ, ಹರೀಶ್‍ಕುಮಾರ್ ಉಪಸ್ಥಿತರಿದ್ದರು.