ಮೂಡಿಗೆರೆ : ಪ್ರವಾಸಿ ತಾಣಗಳಾದ ದೇವರಮನೆ, ಬಲ್ಲಾಳರಾಯನ ದುರ್ಗದಲ್ಲಿ ಪ್ರವಾಸಿಗರಿಗೆ ನೋ ಎಂಟ್ರಿ…!

536
firstsuddi

ಕೊಟ್ಟಿಗೆಹಾರ: ಪ್ರವಾಸಿ ತಾಣಗಳಾದ ದೇವರಮನೆ, ಬಲ್ಲಾಳರಾಯನ ದುರ್ಗದಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇದಿಸಲಾಗಿದ್ದು ಸೂಚನಾಫಲಕ ಅಳವಡಿಸಿ ರಸ್ತೆಗೆ ಬ್ಯಾರಿಗೇಡ್‍ಗಳನ್ನು ಹಾಕಲಾಗಿದೆ.

ದೇವರಮನೆಗೆ ಸಾಗುವ ರಸ್ತೆ ಬದಿ ಪೊಲೀಸ್ ಇಲಾಖೆಯಿಂದ ದೇವರ ಮನೆ, ಬಲ್ಲಾಳರಾಯನ ದುರ್ಗ ಸುತ್ತಮುತ್ತಲಿನ ಪ್ರದೇಶಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು ಆದೇಶ ಉಲ್ಲಂಘನೆ ಮಾಡುವ ಪ್ರವಾಸಿಗರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಸೂಚನಾ ಫಲಕ ಹಾಕಲಾಗಿದ್ದು ದೇವರಮನೆಗೆ ಸಾಗುವ ರಸ್ತೆಗೆ ಬ್ಯಾರಿಗೇಡ್ ಅಳವಡಿಸಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಚಾರ್ಮಾಡಿ ಘಾಟ್‍ಗೆ ಸಾಗುವ ಕೊಟ್ಟಿಗೆಹಾರದ ಚೆಕ್‍ಪೋಸ್ಟ್ ಬಳಿ ಸೂಚನಾಫಲಕ ಹಾಕಲಾಗಿದ್ದು ಚಾರ್ಮಾಡಿ ಘಾಟ್ ಮಾರ್ಗವಾಗಿ ಸಂಚರಿಸುವ ವಾಹನಗಳು ಘಾಟ್‍ನಲ್ಲಿ ನಿಲುಗಡೆ ಮಾಡುವುದು, ಮಧ್ಯಪಾನ, ಮಾದಕ ವಸ್ತುಗಳ ಬಳಕೆಯನ್ನು ಹಾಗೂ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣ ನಿಷೇದಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ, ದೇವರಮನೆ ಹಾಗೂ ಚಾರ್ಮಾಡಿ ಘಾಟ್‍ನಲ್ಲಿ ಪೋಲಿಸ್ ಸಿಬ್ಬಂದಿಯನ್ನು ನೇಮಿಸಲಾಗಿದ್ದು ಗಸ್ತುವಾಹನ ಚಾರ್ಮಾಡಿ ಘಾಟ್ ಮತ್ತು ದೇವರಮನೆಯಲ್ಲಿ ಸಂಚರಿಸಲಿವೆ. ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ