
ಬಾಗಲಕೋಟೆ: ಎತ್ತಿನ ಮೈ ತೊಳೆಯಲು ಹೋದ ಯುವ ರೈತನ ಮೇಲೆ ಮೊಸಳೆ ದಾಳಿ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದ ಬಳಿ ಆಲಮಟ್ಟಿ ಜಲಾಶಯ ಹಿನ್ನೀರಲ್ಲಿ ನಡೆದಿದೆ. ಮೊಸಳೆ ದಾಳಿಯಲ್ಲಿ ಯುವ ರೈತ ಧರಿಯಪ್ಪ ಮೇಟಿ ಎಂಬವರ ಕೈ ಕಟ್ ಆಗಿದೆ. ಆದರೆ ಮೊಸಳೆ ದಾಳಿ ಮಾಡುತ್ತಿದ್ದಂತೆ ರೈತ ಜೀವ ರಕ್ಷಣೆಗೆ ಎತ್ತಿನ ಹಗ್ಗ ಹಿಡಿದುಕೊಂಡಿದ್ದು, ರೈತನನ್ನು ಕೂಡಲೇ ಎತ್ತು ಹಿನ್ನಿರಿನಿಂದ ದಡಕ್ಕೆ ಎಳೆದುಕೊಂಡು ಬಂದು ಜೀವ ರಕ್ಷಿಸಿದೆ. ಘಟನೆಯಲ್ಲಿ 32 ವರ್ಷದ ರೈತ ಧರಿಯಪ್ಪ ಮೇಟಿ ಬಲಗೈ ಕಳೆದುಕೊಂಡಿದ್ದು, ಎಡಗೈನಿಂದ ಎತ್ತಿನ ಹಗ್ಗ ಹಿಡಿದಿದ್ದ ರೈತ ಜೀವ ರಕ್ಷಿಸಿಕೊಂಡಿದ್ದಾರೆ. ಎತ್ತಿನ ಹಗ್ಗದ ಆಸರೆಯಿರದಿದ್ದರೆ ಜೀವಕ್ಕೆ ಬಂದಿದ ಕುತ್ತು ತಪ್ಪಿದ್ದು, ಗಾಯಾಳು ರೈತನಿಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕ ಜೆಟಿ ಪಾಟೀಲ್, ರೈತನ ಆರೋಗ್ಯ ವಿಚಾರಿಸಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದು, ಸೂಕ್ತ ಪರಿಹಾರ ಕೊಡಿಸಲು ಸೂಚನೆ ನೀಡಿದ್ದಾರೆ. ರೈತನಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಪರಿಹಾರ ಪ್ರಕ್ರಿಯೆ ನಡೆಸಲು ಸೂಚನೆ ನೀಡಿದ್ದಾರೆ.









