ಕಲಬುರಗಿ: ಎಂಪಿ ಎಲೆಕ್ಷನ್ ನಂತರ ರಾಜ್ಯದಲ್ಲಿ ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ನಿಲ್ಲಿಸ್ತಾರೆ ಅಂತ ಬಿಜೆಪಿ ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುವವರೆಗೆ ಯಾವ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ 11 ತಿಂಗಳಲ್ಲೇ 80 ಭರವಸೆ ಈಡೇರಿಸಿದ್ದಿವಿ, 5 ಗ್ಯಾರಂಟಿ ಯೋಜನೆ ಅದಾಗಲೇ ಅನುಷ್ಠಾನ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ದಿನವೆ 5 ಗ್ಯಾರಂಟಿ ಜಾರಿ ಸಂಕಲ್ಪ ಮಾಡಿ ಆದೇಶ ಹೊರಡಿಸಿದೆವು. ಗ್ಯಾರಂಟಿ ಯೋಜನೆಗೆ ಬಿಜೆಪಿ ಟೀಕೆ ಮಾಡಿತು, ರಾಜ್ಯ ದಿವಾಳಿ ಆಗ್ತದೆ ಅಂದ್ರು. ಅದನ್ನು ಸವಾಲಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.
ಬಿಜೆಪಿ ಸಾಮಾಜಿಕ ನ್ಯಾಯ, ಬಡವರ, ಮೀಸಲಾತಿ ವಿರೋಧಿ ಎಂದು ಟೀಕಿಸಿದ ಅವರು, ಬಿಜೆಪಿಗೆ ಮತ ಹಾಕಿ ಗೆಲ್ಲಿಸಬೇಡಿ ಎಂದು ಕರೆ ನೀಡಿದರು. ಮೋದಿ ಗ್ಯಾರಂಟಿ ಅಂತಾರೆ ಎಂದು ಅಣುಕಿಸಿದ ಸಿದ್ದರಾಮಯ್ಯ ನಮ್ಮದೇ ಜನಪರ ಗ್ಯಾರಂಟಿ ಎಂದರು.










