ಲೋಕಸಭೆಯಲ್ಲಿ ಮೊದಲ ಬಾರಿಗೆ ಸಂಸದೆ ಪ್ರಿಯಾಂಕಾ ಗಾಂಧಿ ಭಾಷಣ.

27

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 15ನೇ ದಿನದ ಕಲಾಪ ನಡೆಯುತ್ತಿದೆ. ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಇಂದು ಎರಡು ದಿನಗಳ ವಿಶೇಷ ಚರ್ಚೆ ಆರಂಭವಾಗಿದೆ. ಈ ಚರ್ಚೆಯ ಮೇಲೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಲಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳು ಸಂವಿಧಾನದ ಕುರಿತು ವಿಶೇಷ ಚರ್ಚೆಗೆ ಸಜ್ಜಾಗುವುದರೊಂದಿಗೆ ಸಂಸತ್ತಿನಲ್ಲಿ ಒಂದು ವಾರದ ನಡೆದ ಕೋಲಾಹಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ. ಕಳೆದ ಕೆಲ ದಿನದ ಚರ್ಚೆ ವೇಳೆ, ಉದ್ಯಮಿ ಅದಾನಿ ವಿವಾದದ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ಕಾಂಗ್ರೆಸ್‍ನ ಒತ್ತಾಯಿಸಿದರೆ, ಕೇಂದ್ರ ಸರ್ಕಾರವು ಜಾರ್ಜ್ ಸೊರೊಸ್ ಜೊತೆ ಕಾಂಗ್ರೆಸ್ ಸಂಬಂಧ ಹೊಂದಿದೆ ಎಂಬ ಆರೋಪ ವಿಚಾರವನ್ನು ಮುಂದಿಟ್ಟಿತ್ತು. ಇವೆರಡೂ ಕೂಡ ಸದನದ ಕಾರ್ಯಕಲಾಪ ಸುಲಲಿತವಾಗಿ ನಡೆಯಲು ಅಡ್ಡಿಪಡಿಸಿದ್ದವು. ಸಂವಿಧಾನದ ಮೇಲಿನ ಚರ್ಚೆಯು ಇಂದು ಮತ್ತು ಶನಿವಾರ ಲೋಕಸಭೆಯಲ್ಲಿ ಹಾಗೂ ಸೋಮವಾರ ಮತ್ತು ಮಂಗಳವಾರ ರಾಜ್ಯಸಭೆಯಲ್ಲಿ ನಡೆಯಲಿದೆ. ಇನ್ನೊಂದೆಡೆ, ರಾಜ್ಯಸಭೆಯಲ್ಲಿ ಕೃತಕ ಬುದ್ಧಿಮತ್ತೆ ಮಸೂದೆ 2023, ಡೀಪ್‍ಫೇಕ್ ತಡೆಗಟ್ಟುವಿಕೆ ಮತ್ತು ಅಪರಾಧೀಕರಣ ಮಸೂದೆ 2023, ಸಂವಿಧಾನ ಮಸೂದೆ 2024 ಹಾಗೂ ವಿಶೇಷ ವಿವಾಹ (ತಿದ್ದುಪಡಿ) ಮಸೂದೆ 2024 ಅಂಗೀಕಾರಗೊಳ್ಳುವ ಸಾಧ್ಯತೆಯಿದೆ. ನವೆಂಬರ್ 25ರಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 20ರಂದು ಕೊನೆಗೊಳ್ಳುವ ಸಾಧ್ಯತೆಯಿದೆ.