ಚಿಕ್ಕಮಗಳೂರು:- ಸಂವಿಧಾನ ಅಂಗೀಕಾರಗೊಂಡು 75 ವರ್ಷಗಳಾದರೂ ಇದುವರೆಗೆ ಆಳಿದ ಯಾವ ಪಕ್ಷಗಳೂ ಅದನ್ನು ಇಡಿಯಾಗಿ ಜಾರಿಗೊಳಿಸಿಲ್ಲ ಎಂದು ಬಿಎಸ್ ಪಿ ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ ಹೇಳಿದರು.
ನಗರದ ಬಿಎಸ್ ಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಬುದ್ಧನ ಮಾನವೀಯತೆಯ ಮೌಲ್ಯಗಳು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳಿನ ಆಶಯವಿದೆ ನಮ್ಮ ದೇಶದ ಸಂವಿಧಾನವನ್ನು ಇಡೀ ಜಗತ್ತೇ ಗೌರವಿಸುತ್ತದೆ ಹಲವಾರು ದೇಶಗಳಲ್ಲಿ ನಮ್ಮ ಸಂವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಇಡೀ ಜಗತ್ತೇ ಒಪ್ಪಿ ಗೌರವಿಸುತ್ತಿರುವ ಹಲವು ದೇಶಗಳು ಅಳವಡಿಸಿಕೊಂಡಿರುವ ನಮ್ಮ ಸಂವಿಧಾನದ ಆಶಯಗಳನ್ನು ಇದುವರೆಗೆ ದೇಶವನ್ನಾಳಿದ ಎಲ್ಲಾ ಪಕ್ಷಗಳೂ ಗಾಳಿಗೆ ತೂರಿವೆ ಅವುಗಳಿಗೆ ಬೇಕಾದಂತೆ ತಿರುಚಿವೆ ಎಂದು ವಿಷಾದಿಸಿದರು.
ಶೋಷಿತ ವರ್ಗ ಮತದಾನದ ಹಕ್ಕನ್ನು ವಿವೇಚನೆಯಿಂದ ಸರಿಯಾಗಿ ಚಲಾಯಿಸಿದರೆ ದೇಶದಲ್ಲಿ ಬಹುಜನ ಸಮಾಜ ಪಕ್ಷ ಅಧಿಕಾರಕ್ಕೆ ಬರುತ್ತದೆ ಹಾಗಾದಾಗ ಮಾತ್ರ ನಮ್ಮ ಸಂವಿಧಾನ ಪೂರ್ತಿಯಾಗಿ ಜಾರಿಯಾಗುತ್ತದೆ ಎಂದು ಹೇಳಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ ಬಿ ಸುಧಾ ಮಾತನಾಡಿ ಅಂಬೇಡ್ಕರ್ ಅವರು ವರ್ಷಗಳ ಕಾಲ ಶ್ರಮಪಟ್ಟು ರಚಿಸಿರುವ ಸಂವಿಧಾನವನ್ನು ಅವರು ಬರೆದಿಲ್ಲ ಎಂದು ಹೇಳುತ್ತಿರುವುದು ದೇಶದ ದುರಂತ ಎಂದರು.
ಸಂವಿಧಾನ ಜಾಗೃತಿ ಜಾಥಾದಲ್ಲಿ ಸಂವಿಧಾನದ ಮಹತ್ವವನ್ನು ಸಾರುವುದನ್ನು ಬಿಟ್ಟು ರಾಜ್ಯ ಸರ್ಕಾರದ ಬಿಟ್ಟಿ ಭಾಗ್ಯಗಳ ಬಗ್ಗೆ ಪ್ರಚಾರ ಮಾಡುತ್ತಿರುವುದು ದುರ್ದೈವ ಎಂದ ಅವರು ಸಂವಿಧಾನವನ್ನು ಇಡಿಯಾಗಿ ಜಾರಿ ಮಾಡಲು ಶಕ್ತವಾಗಿರುವುದು ಬಿಎಸ್ ಪಿ ಮಾತ್ರ ಎಂದು ತಿಳಿಸಿದರು.
ಲೋಕಸಭಾ ಕ್ಷೇತ್ರದ ಸಂಯೋಜಕ ಕೆಆರ್ ಗಂಗಾಧರ್ ಮಾತನಾಡಿ ಸಂವಿಧಾನವನ್ನು ಮುಗಿಸಲು ರಾಜಕೀಯ ಪಕ್ಷಗಳು ಮುಂದಾಗಿದ್ದು ಶೋಷಿತ ವರ್ಗ ಈಗಲಾದರೂ ಎಚ್ಚೆತ್ತು ಅದನ್ನು ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಚೇರಿ ಕಾರ್ಯದರ್ಶಿ ಪಿ ವಿ ತಂಬನ್ ಮಾತನಾಡಿ ಶೋಷಿತ ವರ್ಗ ಆಮಿಷಗಳಿಗೆ ಬಲಿಯಾಗಿ ಮತದಾನ ಮಾಡುವುದನ್ನು ಬಿಡುವವರೆಗೂ ಸಂವಿಧಾನ ಪೂರ್ತಿಯಾಗಿ ಜಾರಿಯಾಗುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೆಂಬ್ಲಿ ಅಧ್ಯಕ್ಷ ಕುಮಾರ್ ಸಂವಿಧಾನ ದಿನವನ್ನು ಆಚರಿಸಿದ ಮಾತ್ರಕ್ಕೆ ಸಂವಿಧಾನ ಉಳಿಯುವುದಿಲ್ಲ ಶೋಷಿತ ವರ್ಗ ಸಂಘಟಿತರಾಗಿ ಅಧಿಕಾರ ಹಿಡಿಯುವ ಮೂಲಕ ಅದನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ಸಂವಿಧಾನ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು ಸಂವಿಧಾನವನ್ನು ರಕ್ಷಿಸುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಬಿ ಎಸ್ ಪಿ ಜಿಲ್ಲಾ ಉಪಾಧ್ಯಕ್ಷೆ ಕೆ ಎಸ್ ಮಂಜುಳ ಕಾರ್ಯದರ್ಶಿ ಬಕ್ಕಿ ಮಂಜುನಾಥ್ ನಗರಾಧ್ಯಕ್ಷ ವಿಜಯಕುಮಾರ್ ನವೀನ್ ಕುಮಾರ್ ಸಿದ್ದಮ್ಮ ರತ್ನಮ್ಮ ವಸಂತ ಉಪಸ್ಥಿತರಿದ್ದರು.










